ಶುಕ್ರವಾರ, ಮೇ 23, 2025

ಮೆಣಸಿನಕಾಯಿ ಬೆಳೆಗಾರರು, ನರ್ಸರಿ ಮಾಲೀಕರು ಸೂಕ್ತ ಕ್ರಮ ಅನುಸರಿಸಿ: ಸಂತೋಷ್ ಸಪ್ಪಂಡಿ

ಬಳ್ಳಾರಿ,ಮೇ 23(ಕರ್ನಾಟಕ ವಾರ್ತೆ): ಜಿಲ್ಲೆಯ ಪ್ರಸಕ್ತ ಸಾಲಿನ ಮೆಣಸಿನಕಾಯಿ ಬೆಳೆಗಾರರು ಹಾಗೂ ನರ್ಸರಿ ಮಾಲೀಕರು ಉತ್ತಮ ಬೆಳೆ ಪಡೆಯಲು ಸೂಕ್ತ ಕ್ರಮ ಅನುಸರಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಸಂತೋಷ ಸಪ್ಪಂಡಿ ಅವರು ತಿಳಿಸಿದ್ದಾರೆ. ನರ್ಸರಿ ಮಾಲೀಕರು ತಮ್ಮ ನರ್ಸರಿ ಚಟುವಟಿಕೆಗಳ ನಿಯಮ ಬದ್ಧಗೊಳಿಸುವ ನಿಟ್ಟಿನಲ್ಲಿ ಕಡ್ಡಾಯವಾಗಿ ಜಿ.ಎಸ್.ಟಿ ನೋಂದಾಯಿಸಿಕೊಳ್ಳಬೇಕು. ನರ್ಸರಿ ಜಾಗ ಗುತ್ತಿಗೆ ಪಡೆದಿದ್ದಲ್ಲಿ ನಿಯಾಮನುಸಾರ ಒಡಂಬಡಿಕೆ ಮಾಡಿಸಿಕೊಳ್ಳಬೇಕು. ನರ್ಸರಿ ಮುಂಭಾಗದಲ್ಲಿ ನರ್ಸರಿಯ ಹೆಸರು ಇರುವ ನಾಮ ಫಲಕ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ. ರೈತರಿಗೆ ಉತ್ತಮ ಗುಣಮಟ್ಟ ಸಸಿಗಳನ್ನು ನೀಡಲು ಅಳವಡಿಸಿಕೊಳ್ಳಬೇಕಾದ ವೈಜ್ಞಾನಿಕ ನರ್ಸರಿ ಕ್ರಮಗಳಾದ ಸ್ಟರ‍್ಲಿಜೈಡ್, ಕೋಕೋಪಿಟ್ ಬಳಕೆ, ತರಕಾರಿ ನರ್ಸರಿಗಳಲ್ಲಿ ಕೀಟ ನಿರೋಧಕ ಬಲೆಗಳ ಬಳಕೆಯ ಬಗ್ಗೆ ಹಾಗೂ ಬೀಜೋಪಚಾರ ಕುರಿತು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು. ನಿಗಧಿತ ಬೆಲೆಗಿಂತ ಅಧಿಕ ಹಣ ಪಡೆದರೆ ಹಾಗೂ ನಿಯಮಗಳ ಪಾಲನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದ್ದಾರೆ. ಮೆಣಸಿನಕಾಯಿ ಬೆಳೆಗಾರರು ಕಡ್ಡಾಯವಾಗಿ ನರ್ಸರಿ ಮೆಣಸಿನಕಾಯಿ ಸಸಿಗಳನ್ನು ಜಿ.ಎಸ್.ಟಿ ನೋಂದಣಿಯಾಗಿರುವ ನರ್ಸರಿಗಳಿಂದಲೇ ಖರೀದಿಸಿ, ಪಾವತಿ ರಸೀದಿಯನ್ನು ಪಹಣಿಯಲ್ಲಿರುವ ರೈತ ಹೆಸರಿಗೆ ಪಡೆದು ನಾಟಿ ಮಾಡಬೇಕು ಹಾಗೂ ಪಡೆದಂತಹ ಪಾವತಿ ರಸೀದಿಯನ್ನು ಬೆಳೆ ಮಾರಾಟ ಆಗುವವರೆಗೂ ಭದ್ರವಾಗಿ ಇಟ್ಟುಕೊಳ್ಳಬೇಕು. ನರ್ಸರಿಗಳಲ್ಲಿ ಮಾಲೀಕರು ತಾವು ಉಪಯೋಗಿಸುವ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ವಿವರಗಳನ್ನು ಕಡ್ಡಾಯವಾಗಿ ವಹಿಯಲ್ಲಿ ನಮೂದಿಸಬೇಕು. ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕಗಳ ವಹಿ ಸಹ ನಿರ್ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ