ಮಂಗಳವಾರ, ಮೇ 5, 2026
ಬಿಸಿಲಿನ ಬೇಗೆಯಿಂದ ಜಾಗ್ರತೆ: ಸಾರ್ವಜನಿಕರಿಗೆ ಜಿಲ್ಲಾ ಆರೋಗ್ಯ ಇಲಾಖೆಯ ಮಹತ್ವದ ಸಲಹೆಗಳು
ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ):
ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಏರುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
*ಆರೋಗ್ಯ ರಕ್ಷಣೆಗೆ ಪ್ರಮುಖ ಕ್ರಮಗಳು:*
*ಸಾಕಷ್ಟು ನೀರು ಕುಡಿಯಿರಿ:* ಬಾಯಾರಿಕೆ ಇಲ್ಲದಿದ್ದರೂ ದಿನವಿಡೀ ಅತಿ ಹೆಚ್ಚು ನೀರನ್ನು ಕುಡಿಯುತ್ತಿರಬೇಕು. ನಿರ್ಜಲೀಕರಣ ತಡೆಯಲು ಇದು ಅತಿ ಮುಖ್ಯವಾಗಿದೆ.
*ನೈಸರ್ಗಿಕ ಪಾನೀಯಗಳ ಬಳಕೆ:* ಅಂಗಡಿಯ ಕೃತಕ ಪಾನೀಯಗಳ ಬದಲು ಮನೆಯಲ್ಲಿ ತಯಾರಿಸಿದ ನಿಂಬೆ ಹಣ್ಣಿನ ರಸ, ಮಜ್ಜಿಗೆ ಹಾಗೂ ನೈಸರ್ಗಿಕ ಎಳೆನೀರನ್ನು ಹೆಚ್ಚಾಗಿ ಸೇವಿಸಬೇಕು.
*ಆಹಾರ ಕ್ರಮ:* ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ ಹಾಗೂ ದ್ರಾಕ್ಷಿಯಂತಹ ನೀರಿನ ಅಂಶ ಹೆಚ್ಚಿರುವ ಹಣ್ಣು ಮತ್ತು ತರಕಾರಿಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
*ಉಡುಪು:* ಹಗುರವಾದ, ತಿಳಿ ಬಣ್ಣದ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಲಿದೆ.
*ಹೊರಹೋಗುವಾಗ ವಹಿಸಬೇಕಾದ ಮುನ್ನೆಚ್ಚರಿಕೆ:*
ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಆ ಸಮಯದಲ್ಲಿ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಅನಿವಾರ್ಯವಿದ್ದಲ್ಲಿ ಛತ್ರಿ, ಟೋಪಿ, ಕಪ್ಪು ಕನ್ನಡಕ ಹಾಗೂ ಚಪ್ಪಲಿಗಳನ್ನು ಕಡ್ಡಾಯವಾಗಿ ಬಳಸಿ. ಸಭೆ-ಸಮಾರಂಭಗಳನ್ನು ನಡೆಸುವವರು ಜನರಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.
*ತುರ್ತು ಸಂದರ್ಭದಲ್ಲಿ ಏನು ಮಾಡಬೇಕು?*
ಬಿಸಿಲಿನಿಂದ ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದರೆ, ಕೂಡಲೇ ಅವರನ್ನು ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆ ಬಟ್ಟೆಯಿಂದ ಮೈ ಒರೆಸಿ, ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.
*ಪ್ರಾಣಿಗಳ ಬಗ್ಗೆ ನಿಗಾ ಇರಲಿ:*
ಮನುಷ್ಯರಷ್ಟೇ ಅಲ್ಲದೆ ಸಾಕು ಪ್ರಾಣಿಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಅವುಗಳನ್ನು ನೆರಳಿನಲ್ಲಿರಿಸಿ, ಕುಡಿಯಲು ಸಾಕಷ್ಟು ನೀರಿನ ವ್ಯವಸ್ಥೆ ಮಾಡಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಒಂಟಿಯಾಗಿ ಬಿಟ್ಟು ಹೋಗಬಾರದು ಎಂದು ಅವರು ತಿಳಿಸಿದ್ದಾರೆ.
ಆಲ್ಕೋಹಾಲ್, ಅತಿಯಾದ ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ (ತಂಪು ಪಾನೀಯ) ಪಾನೀಯಗಳು ದೇಹವನ್ನು ಶೀಘ್ರವಾಗಿ ನಿರ್ಜಲೀಕರಣಗೊಳಿಸುವುದರಿಂದ ಅವುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.
ವಿಶೇಷವಾಗಿ ಕೆರೆ, ಬಾವಿ ಅಥವಾ ಕಾಲುವೆಗಳ ಹತ್ತಿರ ಮಕ್ಕಳು ಹೋಗದಂತೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಡಿಹೆಚ್ಓ ಡಾ.ಯಲ್ಲಾ ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ