ಬುಧವಾರ, ಸೆಪ್ಟೆಂಬರ್ 24, 2025

ಲಸಿಕೆ ಹಾಕಿಸಿ ರೇಬಿಸ್ ತಡೆಗಟ್ಟಿಸಿ: ಡಾ.ಕೆ.ಶೋಭಾ ಸಲಹೆ

ಬಳ್ಳಾರಿ,ಸೆ.24(ಕರ್ನಾಟಕ ವಾರ್ತೆ): ರೇಬಿಸ್ ಗಂಭೀರ ಮಾರಣಾಂತಿಕ ಕಾಯಿಲೆಯಾಗಿದ್ದು, ನಾಯಿ ಕಚ್ಚಿದ ತಕ್ಷಣ ನಿರ್ಲಕ್ಷö್ಯ ಮಾಡದೇ ಮತ್ತು ಗಿಡಮೂಲಿಕೆಗಳ ಔಷಧಿ ಕೊಡಿಸದೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ರೇಬಿಸ್ ಇಮ್ಯೂನೊಗ್ಲೊಬಿಲಿನ್ ಲಸಿಕೆ ಹಾಕಿಸಬೇಕು ಎಂದು ಮಿಲ್ಲರ್ ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಶೋಭಾ ಅವರು ಹೇಳಿದರು. ಮಿಲ್ಲರ್ ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹನುಮಾನ್ ನಗರ ಬಡಾವಣೆಯಲ್ಲಿ ನಾಯಿ ಕಚ್ಚುವುದರಿಂದ ಬರುವ ರೇಬೀಸ್ ಕಾಯಿಲೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಯಿ ಕಡಿತದ ಜಾಗದಲ್ಲಿ ಸ್ವಚ್ಛ ನೀರಿನಿಂದ 10 ರಿಂದ 15 ನಿಮಿಷಗಳ ಕಾಲ ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ರಕ್ತ ಸ್ರಾವ ಆಗುತ್ತಿದ್ದಲ್ಲಿ ಆ ಭಾಗಕ್ಕೆ ಸ್ವಚ್ಛವಾದ ಬಟ್ಟೆಯಿಂದ ಅಥವಾ ಹತ್ತಿಯಿಂದ ನಿಧಾನವಾಗಿ ಒತ್ತಿ ಸಾಧ್ಯವಾದಷ್ಟು ಬೇಗ ರಕ್ತಸ್ರಾವ ನಿಲ್ಲಿಸಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಅಥವಾ ಆ ಬಡಾವಣೆಯ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶರತ್ ಸಿ.ಆರ್., ಚೇತನ್ ಎಂ.ಕೆ., ಎಂ.ಎಲ್.ವಿ ಸೋಮಶೇಖರ್ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ತಾಯಮ್ಮ, ನವೀನ, ಶ್ರುತಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ