ಶುಕ್ರವಾರ, ಮೇ 8, 2026
ಕುಡತಿನಿ ಪಟ್ಟಣ ವ್ಯಾಪ್ತಿಯಲ್ಲಿ ಮೇ 14ರವರೆಗೆ ನಿಷೇಧಾಜ್ಞೆ ಜಾರಿ
ಬಳ್ಳಾರಿ,ಮೇ 07(ಕರ್ನಾಟಕ ವಾರ್ತೆ):
ಕುಡತಿನಿ ಕೈಗಾರಿಕಾ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ಮತ್ತು ಗಡಿ ಗುರುತಿಸುವಿಕೆ ವೇಳೆ ಉಂಟಾಗಬಹುದಾದ ಪ್ರತಿಭಟನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಯ ದೃಷ್ಟಿಯಿಂದ ಕುಡತಿನಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 07 ರಿಂದ 14 ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಪ-ವಿಭಾಗಾಧಿಕಾರಿ ರಾಜೇಶ್ ಹೆಚ್.ಡಿ ಅವರು ಆದೇಶ ಹೊರಡಿಸಿದ್ದಾರೆ.
*ಹಿನ್ನೆಲೆ:*
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕುಡತಿನಿ ಪ್ರದೇಶದಲ್ಲಿ ಭೂಸ್ವಾಧೀನಪಡಿಸಿಕೊಂಡಿರುವ ಜಮೀನಿನ ಮೊಜಣಿ ಹಾಗೂ ಗಡಿ ಗುರುತಿಸಲು ಮುಂದಾಗಿದೆ. ಈ ವೇಳೆ ಸ್ಥಳೀಯ ಭೂ ಸಂತ್ರಸ್ತ ರೈತರು ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂಬುದಾಗಿ ಪೊಲೀಸರು ವರದಿ ನೀಡಿರುವ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾದ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
*ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳು:*
ಬಳ್ಳಾರಿ ಉಪ-ವಿಭಾಗಾಧಿಕಾರಿ ರಾಜೇಶ ಹೆಚ್.ಡಿ. ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅಡಿ ಈ ಕೆಳಗಿನ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಿದ್ದಾರೆ.
ಸಂಪೂರ್ಣ ಕುಡತಿನಿ ಕೆ.ಐ.ಎ.ಡಿ.ಬಿ ಪ್ರದೇಶ, ಬಳ್ಳಾರಿ ಬೈಪಾಸ್ ರಸ್ತೆಯಿಂದ ಸುಲ್ತಾನಪುರ ಕ್ರಾಸ್ ಬಳಿಯ ಬೂದಿಕಣಿವೆವರೆಗೆ, ಸುಲ್ತಾನಪುರ ಕ್ರಾಸ್ನಿಂದ ಸುಲ್ತಾನಪುರ ಗ್ರಾಮದವರೆಗೆ, ಕುಡತಿನಿ ಪಟ್ಟಣದಿಂದ ಹರಗಿನದೊಣಿ ರಸ್ತೆಯವರೆಗೆ, ಕುಡತಿನಿ ಪಟ್ಟಣದಿಂದ ತಿಮ್ಮಲಾಪುರ ಗ್ರಾಮದವರೆಗೆ, ಕುಡತಿನಿ ಪಟ್ಟಣದಿಂದ ಏಳುಬೆಂಚಿ ರಸ್ತೆಯ ರೈಲ್ವೇ ಗೇಟ್ ವರೆಗಿನ ಪ್ರದೇಶ.
ನಿಗದಿಪಡಿಸಿದ ಪ್ರದೇಶಗಳಲ್ಲಿ 4ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಮಾರಕಾಸ್ತ್ರಗಳು, ಪೆಟ್ರೋಲ್, ಡೀಸೆಲ್, ವಿಷದ ಬಾಟಲಿಗಳು, ಕಲ್ಲು, ಸೌದೆ ಅಥವಾ ಚಾಕುಗಳಂತಹ ಹರಿತವಾದ ಆಯುಧಗಳನ್ನು ಹಿಡಿದು ಓಡಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
ಈ ಆದೇಶವು ಮೇ 7ರ ಸಂಜೆ 06 ಗಂಟೆಯಿಂದ ಮೇ 14ರ ಸಂಜೆ 06 ಗಂಟೆಯವರೆಗೆ ಜಾರಿಯಲ್ಲಿರಲಿದೆ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
=====
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ