ಮಂಗಳವಾರ, ಜುಲೈ 8, 2025

ಆಶಾಕಿರಣ ಯೋಜನೆ: ಕಣ್ಣಿನ ದೃಷ್ಟಿದೋಷವುಳ್ಳವರಿಗೆ ವರದಾನ-ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು

ಬಳ್ಳಾರಿ,ಜು.08(ಕರ್ನಾಟಕ ವಾರ್ತೆ): ಕಣ್ಣಿನ ಸಮಸ್ಯೆ ಕಂಡುಬAದಲ್ಲಿ ಗ್ರಾಮೀಣ ಭಾಗದ ಜನತೆಯು ಜಿಲ್ಲೆಯ ಆರೋಗ್ಯ ಕೇಂದ್ರಗಳ ದೃಷ್ಟಿಕೇಂದ್ರಗಳಿಗೆ ಆಗಮಿಸಿ ನೇತ್ರ ಪರೀಕ್ಷೆ ಕೈಗೊಳ್ಳುವ ಮೂಲಕ ಕಣ್ಣಿನ ಆರೈಕೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು. ಮಂಗಳವಾರ ಮೋಕಾ ಸಮುದಾಯ ಆರೋಗ್ಯ ಕೇಂದ್ರದಲ್ಲಿಯ ದೃಷ್ಟಿಕೇಂದ್ರಕ್ಕೆ ಭೇಟಿ ನೀಡಿ ಕಣ್ಣಿನ ಪರೀಕ್ಷೆ ಕೈಗೊಂಡು ಕನ್ನಡಕ ಪಡೆದುಕೊಂಡ ಸಾರ್ವಜನಿಕರ ಜೊತೆ ಮಾತನಾಡಿದ ಅವರು, ಕಳೆದ ಗುರುವಾರ ಉಪಮುಖ್ಯಮಂತ್ರಿಯವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಏಕಕಾಲಕ್ಕೆ ರಾಜ್ಯಾದ್ಯಂತ ಈ ಯೋಜನೆಯ ಚಾಲನೆ ನೀಡಿದ್ದಾರೆ. ಇದು ಕಣ್ಣಿನ ದೃಷ್ಟಿದೋಷವುಳ್ಳವರಿಗೆ ವರದಾನವಾಗಿದೆ ಎಂದು ಅವರು ತಿಳಿಸಿದರು. ಕಣ್ಣಿನ ದೃಷ್ಟಿಯಿಂದ ಉಂಟಾಗುವ ಸಣ್ಣ ಹಾನಿಯು ಜೀವನ ನಡೆಸುವುದಕ್ಕೆ ಕಷ್ಟವಾಗುವುದನ್ನು ಮನಗಂಡು ಉಚಿತ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಹಾಗೂ ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಶಸ್ತçಚಿಕಿತ್ಸೆ ಸೌಲಭ್ಯ ಒದಗಿಸಿದೆ ಎಂದರು. ಜಿಲ್ಲೆಯಲ್ಲಿ ಬಳ್ಳಾರಿಯ ಜಿಲ್ಲಾ ಆಸ್ಪತ್ರೆ, ಸಂಡೂರು, ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆ, ಮೋಕಾ, ರೂಪನಗುಡಿ, ಕಂಪ್ಲಿ, ಕುರುಗೋಡು, ತೋರಣಗಲ್ಲು, ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ದೃಷ್ಟಿಕೇಂದ್ರಗಳನ್ನು ಆರಂಭಿಸಲಾಗಿದ್ದು, ಕಣ್ಣಿನ ತಪಾಸಣೆಗಾಗಿಯೇ ನಗರಗಳಿಗೆ ಆಗಮಿಸಿ ಹಣದ ವೆಚ್ಚ ಮಾಡಿಕೊಳ್ಳದೇ ತಮ್ಮ ಹತ್ತಿರದ ದೃಷ್ಟಿಕೇಂದ್ರ ಇರುವ ಆಸ್ಪತ್ರೆಗೆ ತೆರಳಿ ಕಣ್ಣಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ವಿನಂತಿಸಿದರು. ಈ ವೇಳೆ ಮೋಕಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭಾರತಿ, ದಂತ ತಜ್ಞರಾದ ಡಾ.ಅರ್ಜುಂ ಮುನ್ನಿಸಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ದೃಷ್ಟಿಕೇಂದ್ರದ ನೇತ್ರಾಧಿಕಾರಿ ಮಂಜುನಾಥ, ಸಿಬ್ಬಂದಿ ವೈಷ್ಣವಿ ಸೇರಿದಂತೆ ಇತರರು ಇದ್ದರು. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ