ಶನಿವಾರ, ಡಿಸೆಂಬರ್ 30, 2023
ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ವದಂತಿಗೆ ಕಿವಿಗೊಡದಿರಿ
ಬಳ್ಳಾರಿ,ಡಿ.30(ಕರ್ನಾಟಕ ವಾರ್ತೆ):
ಅಡುಗೆ ಅನಿಲ ಸಂಪರ್ಕ ಹೊಂದಿರುವ (ಎಲ್.ಪಿ.ಜಿ ಗ್ಯಾಸ್) ಫಲಾನುಭವಿಗಳು, ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಎಂಬ ವದಂತಿಗೆ ಕಿವಿಗೊಡದಿರಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಸಕೀನ ಅವರು ತಿಳಿಸಿದ್ದಾರೆ.
ಡಿ.31ರ ಒಳಗಾಗಿ ಗ್ಯಾಸ್ ಏಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಹಾಗೂ ಸಿಲಿಂಡರ್ ಸರಬರಾಜು ಮಾಡಲಾಗುತ್ತದೆ ಎನ್ನುವ ವದಂತಿ ಮತ್ತು ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕೆಂಬ ವದಂತಿ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಠಿಗೆ ಕಾರಣವಾಗಿರುತ್ತದೆ. ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಬಯೋಮೆಟ್ರಿಕ್ ನೀಡಲು ಕೇಂದ್ರ ಸರ್ಕಾರವು ಯಾವುದೇ ರೀತಿಯ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಬಯೋಮೆಟ್ರಿಕ್ ನೀಡಬಹುದಾಗಿದೆ.
ಜಿಲ್ಲೆಯ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಅನಾವಶ್ಯಕ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ ಸಂಖ್ಯೆ ದಾಖಲಾತಿಯೊಂದಿಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಇ-ಕೆವೈಸಿ ಉಚಿತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಅಡುಗೆ ಅನಿಲ ಗ್ಯಾಸ್ ಬಳಕೆದಾರರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ