ಶುಕ್ರವಾರ, ಡಿಸೆಂಬರ್ 29, 2023

ಗರ್ಭಿಣಿಯಂದು ತಿಳಿದ ಕೂಡಲೆ ತಾಯಿ ಕಾರ್ಡ್ ಪಡೆಯಲು ಮಾಹಿತಿ ನೀಡಿ: ಡಾ.ಶಂಕ್ರಪ್ಪ ಮೈಲಾರಿ

ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ): ಗರ್ಭಿಣಿ ಎಂದು ತಿಳಿದ ಕೂಡಲೆ, 12 ವಾರದೊಳಗೆ ಸಂಬಂಧಿತ ಗರ್ಭಿಣಿಗೆ ತಾಯಿ ಕಾರ್ಡ್ ಒದಗಿಸುವ ಜೊತೆಗೆ ಕಾರ್ಡ್‍ನಲ್ಲಿ ನಮುದಾಗಿರುವ ಮಾಹಿತಿಯನ್ನು ತಿಳಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲ್ಬುರ್ಗಿ ವಿಭಾಗೀಯ ಸಹ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗರ್ಭಿಣಿಯವರಿಗೆ ಸಕಾಲದಲ್ಲಿ ತಾಯಿ ಕಾರ್ಡ್ ಒದಗಿಸುವ ಮೂಲಕ ಅವರ ಆಧಾರ್ ಮತ್ತು ಬ್ಯಾಂಕ್ ಮಾಹಿತಿಯನ್ನು ಕ್ರೂಢೀಕರಿಸಿ ಹೆರಿಗೆ ಅಪೂರ್ವದಲ್ಲಿ ಸಿಗುವ ಎಲ್ಲಾ ಚುಚ್ಚುಮದ್ದುಗಳು ಕಬ್ಬಿಣ ಅಂಶ ಮಾತ್ರೆಗಳನ್ನು ಸಕಾಲದಲ್ಲಿ ಕೊಡಿಸುವ ಮೂಲಕ ರಕ್ತಹೀನತೆಯನ್ನು ನಿಯಂತ್ರಿಸಿ ಸಹಜ ಹೆರಿಗೆಗೆ ಅಗತ್ಯ ಇರುವ ಸಿದ್ಧತೆಯನ್ನು ಕೈಗೊಳ್ಳಲು ತಿಳಿಸಿದರು. ಜನನದ ನಂತರ ಮಗುವಿಗೆ 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳನ್ನು ಸಂಪೂರ್ಣವಾಗಿ ಒದಗಿಸಲು ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಮಾತನಾಡಿ, ನವಂಬರ್ ತಿಂಗಳಿನಿಂದ ಇಲ್ಲಿಯವರೆಗೆ ತಾಯಿ ಮರಣವಾಗಿಲ್ಲ, ಹೆರಿಗೆ ನಿರೀಕ್ಷಿತ ದಿನಾಂಕ ಇರುವುವವರಿಗೆ ಸಂಪರ್ಕ ಕೈಗೊಂಡು ಅಗತ್ಯ ಸಿದ್ಧತೆಗಳು ಮಾಡಿಕೊಳ್ಳಲು ಮತ್ತು ಆಸ್ಪತ್ರೆಗೆ ಹೆರಿಗೆಗಾಗಿ ಬಂದಾಗ ಸಂಬಂಧಿಸಿದ ವೈದ್ಯರು ಮತ್ತು ಸಿಬ್ಬಂದಿಯವರು ಮೇಲ್ವಿಚಾರಣೆ ಕೈಗೊಂಡು ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವಾಗ ಜವಾಬ್ದಾರಿಯುತ ಸಿಬ್ಬಂದಿ, ಆಶಾ ಕಾರ್ಯಕರ್ತೆಯನ್ನು ಕಳುಹಿಸಿಕೊಂಡುವುದರಿಂದ ಸಾಕಷ್ಟು ಸಹಕಾರಿಯಾಗಿದೆ. ಅಲ್ಲದೆ ಗರ್ಭಿಣಿ ಅವಧಿಯ ಆರಂಭಿಕ ತಿಂಗಳುಗಳಲ್ಲಿ ರಕ್ತಸ್ರಾವ, ಮಗುವಿನ ಚಲನೆ ಇಲ್ಲದಿದ್ದರೆ, ಇತರೆ ಯಾವುದೇ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆದು ಸ್ಕ್ಯಾನಿಂಗ್ ಮಾಡಿಸಿ ಸಮಸ್ಯೆಯನ್ನು ಗುರ್ತಿಸಲು ಸಹಕರಿಸಲು ಹೆಚ್ಚು ಮಾಹಿತಿ ಪ್ರಚಾರಕ್ಕೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. *ಕೋವಿಡ್ ನಿರ್ವಹಣೆಗೆ ಸಿದ್ದತೆ:* ಕೋವಿಡ್ ಮುಂಜಾಗ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್‍ಗಳ ಸಿದ್ದತೆ, ಆಕ್ಸಿಜನ್ ಸಂಪರ್ಕ ಸಮರ್ಪಕವಾಗಿದ್ದು, ಪ್ರತಿ ದಿನ ಕೆಮ್ಮು ನೆಗಡಿ ಉಸಿರಾಟದ ತೊಂದರೆ ಇರುವವರನ್ನು ಗುರ್ತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಹೊರಗಡೆ ಬರುವಂತ ಸಂದರ್ಭದಲ್ಲಿ ಮಾಸ್ಕ್ ಧರಿಸಲು ಜಾಗೃತಿ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ.ರಾಮ ಶೆಟ್ಟಿ, ಡಾ.ಗುರುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ, ಡಾ.ಭರತ್, ಡಾ.ಅರುಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೇಂಕೋಬ್ ನಾಯ್ಕ್ ಸೇರಿದಂತೆ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ