ಮಂಗಳವಾರ, ನವೆಂಬರ್ 25, 2025

ಮಕ್ಕಳಿಗೆ ಉಸುಳಿಕಾಳು ನೀಡುವ ಅನುಷ್ಠಾನ ಕಾರ್ಯಕ್ರಮ ಪರಿಶೀಲಿಸಿದ ಡಾ.ಸಂಜಯ್ ಎಸ್ ಬಿಜ್ಜೂರ್

ಬಳ್ಳಾರಿ,ನ.25(ಕರ್ನಾಟಕ ವಾರ್ತೆ): ಕೆಎಂಇಆರ್ ಸಿ ಯ ಸಿಇಪಿಎಂಐಜೆಡ್ ಯೋಜನೆಯಡಿ ಪ್ರೌಢಶಾಲಾ ಮಕ್ಕಳಿಗೆ ಉಸುಳಿಕಾಳು ನೀಡುವ ಅನುಷ್ಠಾನ ಕಾರ್ಯಕ್ರಮವನ್ನು ಕೆಎಂಇಆರ್ ಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜಯ್ ಎಸ್ ಬಿಜ್ಜೂರ್ ಅವರು ದೋಣಿಮಲೈ ನ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ನಿಗದಿತ ಪ್ರಮಾಣದಲ್ಲಿ ಕಾಳು ವಿತರಿಸಲಾಗುತ್ತಿದೆಯೇ, ರುಚಿಯಾಗಿರುತ್ತದೆಯೇ? ಕಡಿಮೆ ಪ್ರಮಾಣದಲ್ಲಿದ್ದರೆ ಶಿಕ್ಷಕರ ಗಮನಕ್ಕೆ ತರಬೇಕು. ಹಣ್ಣು ವಿತರಣೆ ಮಾಡುತ್ತಿದ್ದಾರೆಯೇ ಎಂದು ಮಕ್ಕಳಲ್ಲಿ ಮಾಹಿತಿ ಪಡೆದುಕೊಂಡರು. ಗುಣಮಟ್ಟದ ಮೊಳಕೆಯೊಡೆದ ಕಾಳುಗಳು ವಿತರಣೆ ಮಾಡಬೇಕು. ಸ್ವಚ್ಛತೆ ಕಾಯ್ದುಕೊಳ್ಳಬೇಕು. ಸರಿಯಾಗಿ ಬೇಯಿಸಿದ ಕಾಳನ್ನೇ ಮಕ್ಕಳಿಗೆ ನೀಡಬೇಕು ಎಂದು ಅಡುಗೆ ಸಿಬ್ಬಂದಿಗೆ ಸೂಚಿಸಿದರು. ಬಳಿಕ ಮಕ್ಕಳಿಗೆ ಉಸುಳಿಕಾಳು ವಿತರಣೆ ಮಾಡಿ, ತಾವು ಸವಿದರು. ಈ ವೇಳೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ದ್ವಿತೀಯ ಸೇರಿದಂತೆ ಸಮಗ್ರ ಶಿಕ್ಷಣ ಅಭಿಯಾನದ ಅಧಿಕಾರಿಗಳು, ಮಧ್ಯಾಹ್ನ ಬಿಸಿಯೂಟದ ಯೋಜನಾಧಿಕಾರಿಗಳು, ಶಾಲಾ ಶಿಕ್ಷಕರು, ಮಕ್ಕಳು ಇದ್ದರು. ========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ