ಶನಿವಾರ, ಮಾರ್ಚ್ 7, 2026

ಸಮಾಜ ಕಲ್ಯಾಣ ಇಲಾಖೆ: 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಮಾ.07(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2026-27ನೇ ಸಾಲಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು 6 ನೇ ತರಗತಿಗೆ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶಾತಿಗೆ ಆಯ್ಕೆ ಮಾಡಲು ಅರ್ಹ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಪ್ರತಿಷ್ಠಿತ ಶಾಲೆಗಳಾದ ವಸತಿ ರಹಿತ-ಶ್ರೀ ವಿಶ್ವೇಶ್ವರಯ್ಯ ಫ್ರೌಢ ಶಾಲೆ ಅಲ್ಲೀಪುರ (ಬೆಸ್ಟ್ ಸ್ಕೂಲ್), ಶ್ರೀ ನಂದ ವಸತಿ ಶಾಲೆ ವಿದ್ಯಾನಗರ, ಶ್ರೀ ನಂದಿ ಫ್ರೌಢಶಾಲೆ (ಸಿಬಿಎಸ್‌ಇ) ಬೆಳಗಲ್ ಕ್ರಾಸ್. ವಸತಿ ಸಹಿತ-ವಿಜಯಮೇರಿ ಪ್ರಾಥಮಿಕ ಶಾಲೆ ಸಿರುಗುಪ್ಪ, ಬೃಂದಾ ಇಂಟರ್ ನ್ಯಾಷನಲ್ ಸ್ಕೂಲ್ ದಮ್ಮೂರು. ಪ್ರವೇಶ ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ಅರ್ಜಿಗಳನ್ನು ಏ.15 ರಿಂದ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಮೇ 04 ಕೊನೆಯ ದಿನ. *ಅರ್ಹತೆ:* ಪರಿಶಿಷ್ಟ ಜಾತಿಯ ವಿದ್ಯಾರ್ಥಿಯಾಗಿರಬೇಕು. ಅಭ್ಯರ್ಥಿಯ ಕುಟುಂಬದ ಆದಾಯ ರೂ.02 ಲಕ್ಷ ಒಳಗಿರಬೇಕು. ಅಭ್ಯರ್ಥಿ 5ನೇ ತರಗತಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. *ಬೇಕಾದ ದಾಖಲೆಗಳು:* ವಿದ್ಯಾರ್ಥಿಯ ಆಧಾರ್ ಕಾರ್ಡ್, ದೂರವಾಣಿ ಸಂಖ್ಯೆ, ಪಾಸ್‌ಪೋರ್ಟ್ ಸೈಜ್ 2 ಫೋಟೋ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, 5ನೇ ತರಗತಿ ಅಂಕಪಟ್ಟಿ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ, ಮುಖೋಪಾದ್ಯಾಯರಿಂದ ನಡತೆ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ. ಹೆಚ್ಚಿನ ಮಾಹಿತಿಗಾಗಿ ನಗರದ ಕೌಲ್ ಬಜಾರ್ 1ನೇ ಗೇಟ್ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ