ಶುಕ್ರವಾರ, ಫೆಬ್ರವರಿ 23, 2024

ಸಂವಿಧಾನ ಜಾಥಾಗೆ ಅದ್ದೂರಿ ಸ್ವಾಗತ

ಬಳ್ಳಾರಿ,ಫೆ.23(ಕರ್ನಾಟಕ ವಾರ್ತೆ): ಸಂವಿಧಾನ ಜಾರಿಗೊಂಡು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಂಗವಾಗಿ “ಸಂವಿಧಾನ ಜಾಗೃತಿ ಜಾಥಾ”ವು ಸಂಡೂರು ತಾಲ್ಲೂಕಿನ ಚೋರನೂರು, ಬೊಮ್ಮಘಟ್ಟ, ಯರ್ರಯ್ಯನಹಳ್ಳಿ ಹಾಗೂ ಗೊಲ್ಲಲಿಂಗಮ್ಮನಹಳ್ಳಿ ಸಂಚರಿಸಿದ್ದು, ಜಾಥಾಗೆ ಅದ್ದೂರಿಯಾಗಿ ಬರಮಾಡಿಕೊಂಡರು. ಜಾಥಾದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿ, ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು. ಜಾಥಾವನ್ನು ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ನೇತಾರರ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು, ಕೋಲಾಟದ ಮೂಲಕ ನೃತ್ಯ, ಹಲಗೆ ಮತ್ತು ಡೊಳ್ಳು ಕಲಾವಿದರು, ತಾಷಾ ರಾಂಡೋಲ್, ಕಂಸಾಳೆ ಹಾಗೂ ನಂದಿ ಕೋಲು ಕುಣಿತದ ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ಜಾಥಾವು ಮೊದಲಿಗೆ ಚೋರನೂರು ಗಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಚೋರನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರ ಲೇಜಿಮ್ ನೃತ್ಯ, ವಿದ್ಯಾರ್ಥಿಗಳ ಕೋಲಾಟದ ನೃತ್ಯ ಮನಮೋಹಕವಾಗಿತ್ತು. ಬೊಮ್ಮಘಟ್ಟ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿನಿಯರು ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಹಾಡಿಗೆ ಮಾಡಿದ ಲೇಜಿಮ್ ಸಾಮೂಹಿಕ ನೃತ್ಯ ಗಮನ ಸೆಳೆಯಿತು. ಇಲ್ಲಿ ವಿದ್ಯಾರ್ಥಿಗಳ ಡ್ರಮ್ಸ್ ಸೆಟ್ ವಾದನ, ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಜಾಥಾವು ತುಂಬರಗುದ್ದಿ, ಯರ್ರಮ್ಮನಹಳ್ಳಿ, ಸ್ವಾಮಿಹಳ್ಳಿಗಳಲ್ಲಿ ಚಲಿಸಿದ್ದು ಭವ್ಯವಾದ ಸ್ವಾಗತ ದೊರೆತಿದ್ದು, ಪ್ರಸ್ತಾವನೆಯನ್ನು ಬೋಧಿಸಲಾಯಿತು ಹಾಗೂ ಮೆರವಣಿಗೆ ನಡೆಯಿತು. ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ