ಸೋಮವಾರ, ಮೇ 13, 2024

ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್: ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ

ಬಳ್ಳಾರಿ,ಮೇ 13(ಕರ್ನಾಟಕ ವಾರ್ತೆ): ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ `ಸ್ಕಿಲ್ ಡೆವಲಪ್ಮೆಂಟ್ ಸೆಂಟರ್' ನೇತೃತ್ವದಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ಭಾಗವಾಗಿ ತೋರಣಗಲ್ಲು, ಹೊಸಪೇಟೆ ಮತ್ತು ಹಂಪೆಯ ಅಂತಾರಾಷ್ಟ್ರೀಯ ದರ್ಜೆಯ ವಿವಿಧ ಹೋಟಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ಅಂತಾರಾಷ್ಟ್ರೀಯ ದರ್ಜೆಯ ತೋರಣಗಲ್ಲು ವಿದ್ಯಾನಗರ ಹೋಟಲ್ ಹಯಾತ್, ರಾಕ್ ರೀಜೆನ್ಸಿ, ಹೊಸಪೇಟೆಯ ರಾಯಲ್ ಆರ್ಕಿಡ್, ಹಂಪೆಯ ವಿಜಯಶ್ರೀ ಹೆರಿಟೇಜ್ ಮತ್ತು ದರೋಜಿಯ ಎವಾಲ್ವ್ ಬ್ಯಾಕ್ ಹೋಟಲ್‍ನಲ್ಲಿ ಒಟ್ಟು 33 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ಹೋಟಲ್ ಹಯಾತ್‍ನ ಅಸಿಸ್ಟೆಂಟ್ ಜನರಲ್ ಮೇನೇಜರ್ ರವೀಂದ್ರನಾಥ್, ತರಬೇತಿ ಅಧಿಕಾರಿ ನೈಜಲ್ ನಾಯ್ಡು, ರಕ್ಷಿತ್ ಮತ್ತು ಶಂಪಾ ಅವರು, ವಿದ್ಯಾರ್ಥಿಗಳಿಗೆ ಹೋಟಲ್‍ನ ಕೋಣೆಗಳ ನಿರ್ವಹಣೆ, ಹೋಟಲ್‍ನಲ್ಲಿಯ ದೈನಂದಿನ ಚಟುವಟಿಕೆಗಳು, ಗ್ರಾಹಕರೊಂದಿಗಿನ ಆತ್ಮೀಯತೆ, ಶಿಸ್ತು-ಸಂಯಮ ಮತ್ತು ಇನ್ನಿತರೆಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ `ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್'ನ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ತರಬೇತುದಾರರಾದ ಅನಿಲ್ ಕನಗಿನಿ ಮತ್ತು ಅನುμÁ ಅವರು, ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ನೀಡಲು ಅಂತಾರಾಷ್ಟ್ರೀಯ ದರ್ಜೆಯ ಹೋಟಲ್‍ಗಳ ನಿರ್ವಹಣೆ ಮತ್ತು ದೈನಂದಿನ ಚಟುವಟಿಕೆಗಳ ಕುರಿತು ಪ್ರಾಯೋಗಿಕ ತರಬೇತಿ ಅಗತ್ಯವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳನ್ನು ತೋರಣಗಲ್ಲು, ಹೊಸಪೇಟೆ ಮತ್ತು ಹಂಪೆಯ ಹೋಟಲ್‍ಗಳಿಗೆ ಕರೆದುಕೊಂಡು ಬಂದು, ವೃತ್ತಿಪರರಿಂದಲೇ ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ `ಸ್ಕಿಲ್ ಡೆವಲಪ್ಮೆಂಟ್ ಸೆಂಟರ್'ನ ಹೋಟಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ವಿದ್ಯಾರ್ಥಿಗಳಾದ ಎರ್ರಿಸ್ವಾಮಿ ನಾಯಕ್ ಮತ್ತು ಜಿ.ಜ್ಯೋತಿ ಅವರು, ಅಂತಾರಾಷ್ಟ್ರೀಯ ದರ್ಜೆಯ ಹೋಟಲ್‍ಗಳಲ್ಲಿಯ ದೈನಂದಿನ ನಿರ್ವಹಣೆ - ಚಟುವಟಿಕೆಗಳ ಕುರಿತು ಸಾಕಷ್ಟು ಮಾಹಿತಿ ಸಿಕ್ಕಿದೆ. ಕೋರ್ಸ್ ಪೂರ್ಣಗೊಂಡ ನಂತರ ಇಲ್ಲಿಯ ವಿದ್ಯಾರ್ಥಿಗಳಿಗೆ ಉದ್ಯಮದಲ್ಲಿ ಖಂಡಿತವಾಗಿಯೂ ಅಪಾರ ಬೇಡಿಕೆ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಿಡಿಸಿಸಿಐನ ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡ ಅವರು ಮಾತನಾಡಿ, ಹೋಟಲ್‍ಗಳ ನಿರ್ವಹಣೆಯಲ್ಲಿ ವೃತ್ತಿಪರತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಹೋಟಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ತರಬೇತಿ ನೀಡಲಾಗುತ್ತಿದೆ. ಮೊದಲನೇ ಬ್ಯಾಚ್‍ನ ಕೌಶಲ್ಯತೆ ಆಧರಿಸಿ, ಎರಡನೇ ಬ್ಯಾಚ್ ಪ್ರಾರಂಭಿಸುತ್ತೇವೆ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ ಅವರು ಮಾತನಾಡಿದರು. ತರಬೇತಿಯಲ್ಲಿ ಹೋಟಲ್ ಹಯಾತ್‍ನ ಮೈಕಲ್, ರಾಯಲ್ ಆರ್ಕಿಡ್‍ನ ಇಬ್ರಾಹಿಂ, ಎವಾಲ್ವ್ ಬ್ಯಾಕ್‍ನ ಜಾನ್ಸಿ, ವಿದ್ಯಾಶ್ರೀ ರೆಸಾರ್ಟ್‍ನ ತನುಶ್ರೀ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ