ಭಾನುವಾರ, ಮೇ 5, 2024
ಗರ್ಭೀಣಿಯರು ಕಾಲ-ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು: ಡಿಹೆಚ್ಓ ಡಾ.ವೈ.ರಮೇಶಬಾಬು ಸಲಹೆ
ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ):
ಗರ್ಭಿಣಿಯರಿಗೆ ಸಹಜ ಹೆರಿಗೆ ನೋವು ಹೊರತು ಪಡಿಸಿ, ಯಾವುದೇ ತರಹದ ನೋವು ಕಂಡು ಬಂದರೂ ಸಹ ನಿರ್ಲಕ್ಷ್ಯ ಮಾಡದೆ ಹತ್ತಿರ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ಬಾಬು ಅವರು ತಿಳಿಸಿದರು.
ಎಮ್ಮಿಗನೂರು ಗ್ರಾಮದಲ್ಲಿ ಕ್ಷೇತ್ರ ಬೇಟಿಯ ಸಂದರ್ಭದಲ್ಲಿ ಗರ್ಭಿಣಿ ತಾಯಿಯ ಮನೆ ಭೇಟಿ ಕೈಗೊಂಡು ತಾಯಿ ಕಾರ್ಡ್, ತೂಕ, ದೇಹದಲ್ಲಿ ರಕ್ತದ ಪ್ರಮಾಣ ಮುಂತಾದವುಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಶಿಶು ಮತ್ತು ತಾಯಿ ಮರಣವನ್ನು ತಡೆಗಟ್ಟಲು ಗರ್ಭಿಣಿ ಎಂದು ಗೊತ್ತಾದ ದಿನದಿಂದ ಅಗತ್ಯ ಪರೀಕ್ಷೆಗಳು, ದೇಹದಲ್ಲಿ ರಕ್ತದ ಪ್ರಮಾಣ ಅನುಸಾರ ಕಬ್ಬಿಣಾಂಶ ಮಾತ್ರೆಗಳ ಸೇವನೆ, ತೂಕ, ರಕ್ತದೊತ್ತಡ, ಹೆಚ್ಐವಿ, ಹೆಚ್ಬಿಎಸ್ಎಜಿ ಮುಂತಾದ ಅಗತ್ಯ ಪರೀಕ್ಷೆಗೆ ಒಳಗಾಗಬೇಕು ಎಂದು ಸಲಹೆ ಮಾಡಿದರು.
ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಪ್ರಸ್ತುತ ಪ್ರಖರ ಬಿಸಿಲಿನ ಹಿನ್ನಲೆಯಲ್ಲಿ ಗರ್ಭಿಣಿಯರ ಹೆಚ್ಚು ಪೌಷ್ಟಿಕಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಸಾದ್ಯವಾದಷ್ಟು ಹೆಚ್ಚು ನೀರು ಕುಡಿಯುವುದಕ್ಕೆ ಕುಟುಂಬದ ಸದಸ್ಯರಿಗೆ ತಿಳಿಸಿದರು. ಇವುಗಳ ಜೊತೆಗೆ ಗರ್ಭಾವಸ್ಥೆಯಲ್ಲಿ ಕಂಡುಬರಬಹುದಾದ ತೊಂದರೆಗಳು ಮತ್ತು ಅವುಗಳ ಲಕ್ಷಣಗಳಾಧಾರದ ಮೇಲೆ ತಕ್ಷಣ ವೈದ್ಯರ ಭೇಟಿ ಮಾಡುವಂತೆ ತಿಳಿಸಿದರು.
*ಲಕ್ಷಣಗಳು:*
*ಎಕ್ಟೋಪಿಕ್ ಪ್ರೆಗ್ನೆನ್ಸಿ:*
1 ರಿಂದ 3 ತಿಂಗಳ ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಗೆ ಗೊತ್ತಿಲ್ಲದೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವ ತೊಂದರೆಯಾಗಿರುತ್ತದೆ. ಗರ್ಭಿಣಿಗೆ ಗರ್ಭನಾಳದಲ್ಲಿ ಅಥವಾ ಓವರಿಯಲ್ಲಿ, ಗರ್ಭಕೋಶದ ಹೊರಭಾಗದಲ್ಲಿ ಗರ್ಭಕಂಠದ ಹತ್ತಿರ ಗರ್ಭ ನಿಂತಲ್ಲಿ ಅದನ್ನು ಎಕ್ಟೋಪಿಕ್ ಪ್ರೆಗ್ನೆನ್ಸಿ ಎನ್ನಲಾಗುವುದು. ಸಾಮಾನ್ಯವಾಗಿ ಈ ರೀತಿಯ ಗರ್ಭದಾರಣೆಯಲ್ಲಿ ಕೆಲವೊಮ್ಮೆ ಗರ್ಭಿಣಿಗೆ ತೀವ್ರ ರೀತಿಯ ರಕ್ತಸ್ರಾವ, ಸಹಿಸಲಾಗದ ಅಸಾಧಾರಣ ನೋವು, ತಲೆ ತಿರುಗುವಿಕೆ ಕಂಡುಬರಬಹುದು.
*ಆಕಸ್ಮಿಕ ಗರ್ಭಪಾತ ಸಾಧ್ಯತೆಗಳು:*
3 ರಿಂದ 6 ತಿಂಗಳ ಅವಧಿಯ ಎರಡನೇ ತ್ರೈಮಾಸಿಕ ಗರ್ಭಿಣಿ ಅವಧಿಯಲ್ಲಿ ಮಾಸ (ಪ್ಲಾಸೆಂಟಾ) ಗರ್ಭಕೋಶದ ಕೆಳಭಾಗಕ್ಕೆ ಬಂದು ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಈ ಹಂತದಲ್ಲಿ ಕಾರಣವಿಲ್ಲದೆ ರಕ್ತಸ್ರಾವವಾಗುವುದು, ಇದ್ದಕ್ಕಿದ್ದಂತೆ ಹೊಟ್ಟೆನೋವು ಅಥವಾ ಮೊದಲನೆ ಹೆರಿಗೆ ಸಿಜೆರಿಯನ್ ಆಗಿದ್ದರೆ ನೋವು ಜಾಸ್ತಿ ಕಂಡುಬರುವುದು, ಗರ್ಭ ಕಂಠದ ಮಾರ್ಗ ಸಣ್ಣದಿದ್ದಾಗ, ದುರ್ವಾಸನೆಯುಕ್ತ ಯೋನಿಸ್ರಾವವಾಗುತ್ತಿದ್ದರೆ ನಿರ್ಲಕ್ಷಿಸದೆ ವೈದ್ಯರ ಬಳಿ ತಕ್ಷಣ ತೆರಳಬೇಕು.
*ರಕ್ತದೊತ್ತಡದಿಂದ ಉಂಟಾಗುವ ತೊಂದರೆಗಳು:*
6 ರಿಂದ 9 ತಿಂಗಳ ಅವಧಿಯ 3ನೇ ತ್ರೈಮಾಸಿಕ ಅವಧಿಯಲ್ಲಿ ಸಾಮಾನ್ಯವಾಗಿ ರಕ್ತದೊತ್ತಡ ಇದ್ದು ಕಾಲು, ಹೊಟ್ಟೆ, ಮುಖದಲ್ಲಿ ಬಾವು ಕಂಡುಬರುತ್ತಿದ್ದು ಕೆಲವು ಗರ್ಭಿಣಿಯರಲ್ಲಿ ರಕ್ತದೊತ್ತಡ ಹೆಚ್ಚಾಗಿ ಹೊಟ್ಟೆ ಗಟ್ಟಿಯಾದ ಅನುಭವ, ಮಗು ಮಿಸುಗಾಡದೆ ಇರುವುದು ಅಥವಾ ರಕ್ತಸ್ರಾವವಾಗುವುದು ಕಂಡುಬಂದಲ್ಲಿ ನಿರ್ಲಕ್ಷಿಸಬಾರದು. ಈ ಹಂತದಲ್ಲಿ ಗರ್ಭಕೋಶದಲ್ಲಿಯೇ ಮಾಸ (ಪ್ಲಾಸೆಂಟಾ) ಕಳಚಿಕೊಂಡು ರಕ್ತ ಹೆಪ್ಪುಗಟ್ಟುವುದರಿಂದ ಈ ರೀತಿ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಕುಟುಂಬದ ಸದಸ್ಯರು ಗರ್ಭಿಣಿಯನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಕರೆದುಕೊಂಡು ಬರುವ ಮೂಲಕ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವಾಗುವ ಸನ್ನಿವೇಶಗಳನ್ನು ತಪ್ಪಿಸಬಹುದಾಗಿದೆ.
ಅಲ್ಲದೆ ಪ್ರಸ್ತುತ ಬಿಸಿಲಿನ ಪ್ರಖರತೆ ಹೆಚ್ಚು ಇರುವ ಕಾರಣ ಹೆರಿಗೆ ನಂತರದಲ್ಲಿ ಬಾಣಂತಿಯು ಹೆಚ್ಚು ನೀರು ಸೇವಿಸುವಂತೆ ಮಾಡುವುದರಿಂದ ಹಾಲಿನ ಉತ್ಪತ್ತಿಯು ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ನವಜಾತ ಶಿಶುವಿಗೆ 06 ತಿಂಗಳು ವಯಸ್ಸಿನವರೆಗೆ ತಾಯಿ ಎದೆ ಹಾಲು ಹೊರತು ಪಡಿಸಿ ವೈದ್ಯರ ಸಲಹೆ ಇಲ್ಲದೆ ಎನನ್ನೂ ಕೊಡಬಾರದು ಮತ್ತು ಮಗುವಿನ ಒಂದು ವರ್ಷ ವಯಸ್ಸಿನೊಳಗೆ 12 ಮಾರಕ ರೋಗಗಳ ವಿರುದ್ದ ನೀಡುವ ಲಸಿಕೆಗ¼ನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ಹಾಕಿಸುವ ಮೂಲಕ ಮಗುವಿನ ಆರೋಗ್ಯ ಸದೃಡವಾಗಿರಿಸಲು ಸಹಕರಿಸಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಂಪ್ಲಿ ತಾಲ್ಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಅರುಣ್, ವೈದ್ಯಾಧಿಕಾರಿ ಡಾ.ಫಾರೂಖ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ನರ್ಸಿಂಗ್ ಅಧಿಕಾರಿ ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಬಸನಗೌಡ, ವಿಘ್ನೇಶ, ಕೃಷ್ಣಮೂರ್ತಿ, ಪಿಹೆಚ್ಸಿಓ ನಂದಾ, ಪೂಜಾ, ಸಿಹೆಚ್ಓ ಸುಧಾ, ಹನುಮಂತಪ್ಪ, ಶೂಶ್ರೂಷಣಾಧಿಕಾರಿ ಮುತ್ತ್ಯಾಲಮ್ಮ, ಸುಮಿತ್ರಾ, ಆಶಾ ಕಾರ್ಯಕರ್ತೆ ಇಂದಿರಾ ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ