ಸೋಮವಾರ, ಆಗಸ್ಟ್ 25, 2025

ಮಕ್ಕಳೇ ದುಶ್ಚಟಗಳಿಂದ ದೂರವಿರಿ: ಬಸವಲಿಂಗ ಸ್ವಾಮಿ

ಬಳ್ಳಾರಿ,ಆ.25(ಕರ್ನಾಟಕ ವಾರ್ತೆ): ಮಕ್ಕಳು ದುಶ್ಚಟಗಳಿಂದ ದೂರವಿರಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಯ್ಯನ ಕೋಟೆಯ ವಿಜಯ ಮಹಾಂತೇಶ್ವರ ಶಾಖಾಮಠದ ಬಸವಲಿಂಗ ಮಹಾಸ್ವಾಮಿ ಚಿತ್ತರಗಿ ಅವರು ಹೇಳಿದರು. ನಗರದ ಡಾ.ರಾಜ್ ಕುಮಾರ್ ರಸ್ತೆಯ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನಲ್ಲಿ “ಮಕ್ಕಳ ಬದುಕಿಗೆ ಶರಣರ ಚಿಂತನೆಗಳು” ಎಂಬ ವಿಷಯ ಕುರಿತು ಸೋಮವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗುಟ್ಕಾ, ತಂಬಾಕು, ಮದ್ಯಪಾನ ಇವುಗಳಿಂದ ದೂರವಿರಬೇಕು. ಇವು ಆರೋಗ್ಯ ಮತ್ತು ಜೀವನ ಹಾಳು ಮಾಡುತ್ತವೆ. ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿ, ಆದರ್ಶ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಧಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿಜಯ ಮಹಾಂತೇಶ್ವರ ಶಾಖಾಮಠದ ಕಾರ್ಯದರ್ಶಿ ಕಾಂತರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೂಜ್ಯರು ರಾಜ್ಯದ ಹಲವಾರು ಜಿಲ್ಲೆಗಳಲ್ಲಿರುವ ಶಾಲಾ-ಕಾಲೇಜುಗಳಿಗೆ ಹೋಗಿ ಮಕ್ಕಳ ಬದುಕಿಗೆ ದಾರಿದೀಪವಾಗುವ ಉಪನ್ಯಾಸ ನೀಡುವ ಮೂಲಕ ಮಕ್ಕಳ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಕೆ.ಸುಂಕಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳು ಮಹಾನ್ ದಾರ್ಶನಿಕರ ಜೀವನದ ಶೈಲಿಗಳನ್ನು ಆಳವಡಿಸಿಕೊಳ್ಳಬೇಕು. ಪಠ್ಯದ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳ ಉಪನ್ಯಾಸಗಳು ವಿದ್ಯಾರ್ಥಿಗಳ ಬದುಕನ್ನು ಹಸನಾಗಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಗೀತಕಾರರಾದ ಮುಂಕೇಶ್ ಮತ್ತು ಯೋಗೇಶ್ ವಚನಸಂಗೀತ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಮೇಶ್ ಬುಜ್ಜಿ, ಹಿರಿಯ ಉಪನ್ಯಾಸಕ ಟಿ.ತಿಮ್ಮಪ್ಪ, ರಾಜ್ಯಶಾಸ್ತç ಉಪನ್ಯಾಸಕ ನಾಗರೆಡ್ಡಿ ಕೆ.ವಿ., ಗಣಿತ ಉಪನ್ಯಾಸಕ ಕೆ.ವಿ.ಚಂದ್ರಹಾಸ, ಉಪನ್ಯಾಸಕ ಹೆಚ್.ಕೆ.ಮಲ್ಲಿಕಾರ್ಜುನ್ ಶೆಟ್ಟಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಇನ್ನೀತರರು ಉಪಸ್ಥಿತರಿದ್ದರು. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ