ಸೋಮವಾರ, ಫೆಬ್ರವರಿ 2, 2026
ಮೂರು ದಿನಗಳ ಕಾರ್ಯಾಗಾರದ ಸಮಾರೋಪದಲ್ಲಿ ಪ್ರೊ.ತಿಪ್ಪೇರುದ್ರಪ್ಪ.ಜೆ ಹೇಳಿಕೆ | ವ್ಯಕ್ತಿ ಗೌರವ ಎಲ್ಲರಿಗೂ ಮನ್ನಣೆಯಾಗಲಿ
ಬಳ್ಳಾರಿ,ಫೆ.02(ಕರ್ನಾಟಕ ವಾರ್ತೆ):
ಪ್ರತಿಯೊಬ್ಬರ ವ್ಯಕ್ತಿ ಗೌರವಕ್ಕಾಗಿ ಶ್ರಮಿಸಿದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರರು ವಿಶ್ವ ಗುರುವಾಗಿದ್ದಾರೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ತಿಪ್ಪೇರುದ್ರಪ್ಪ ಜೆ ಅವರು ಹೇಳಿದರು.
ವಿವಿಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ವಿವಿಯ ಡಾ.ಬಿ.ಆರ್ ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಮೈಸೂರಿನ ಸಮಾಜ ಕಾರ್ಯಕರ್ತರ ಕ್ರಿಯಾ ಸಂಶೋಧನೆ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ಅಂಬೇಡ್ಕರ ಅವರ ಬರಹಗಳು ಮತ್ತು ಭಾಷಣಗಳ ಮೂಲಕ ಭಾರತೀಯರನ್ನು ಅರ್ಥಮಾಡಿಕೊಳ್ಳುವಿಕೆ’ ಎಂಬು ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರಸ್ತುತವಾಗಿ ಅಂಬೇಡ್ಕರ ಅವರ ಕುರಿತು ಚಿಂತನೆಗಳು ಬಹಳ ಕ್ರಿಯಾಶೀಲವಾಗಿವೆ. ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸೀಮಿತವಾಗಿಲ್ಲ, ಅವರನ್ನು ಮೀಸಲಾತಿಗಾಗಿ ಗುರುತಿಸದೇ ವೈಚಾರಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಜಾತಿ ತಾರತಮ್ಯ ನಿರ್ಮೂಲನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಹೈಕೋರ್ಟ್ ವಕೀಲರಾದ ಮೋಹನ್ ಕುಮಾರ ಅವರು ಮಾತನಾಡಿ, ಸಮಾಜದಲ್ಲಿನ ಕೆಲವು ಸಮುದಾಯಗಳು ಜಾತಿ ತಾರತಮ್ಯವನ್ನು ತಮ್ಮ ಹಕ್ಕನ್ನಾಗಿ ಪರಿಗಣಿಸಿಕೊಂಡAತಾಗಿದೆ. ಜಾತಿ ತಾರತಮ್ಯವನ್ನು ಹೋಗಲಾಡಿಸಲು ವಿದ್ಯಾರ್ಥಿಗಳಲ್ಲಿನ ಕೀಳರಿಮೆ ಹೋಗಲಾಡಿಸಿ, ಅವರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವಾಗಬೇಕು. ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಭಾಗವಹಿಸುವುದರಿಂದ ತಾರತಮ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ಡಿ.ಮನಗಳ್ಳಿ ಅವರು ಮಾತನಾಡಿ, ದೇಶದ ಪರಿಸ್ಥಿತಿಯನ್ನು ಅವಲೋಕನ ಮಾಡುವ ಮೊದಲು ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳಬೇಕು. ಅವರ ಬರಹ ಮತ್ತು ಭಾಷಣಗಳು ಮಾನವ ಅಭಿವೃದ್ಧಿಯ ಕುರಿತಾಗಿವೆ. ವರ್ತಮಾನ, ಭವಿಷ್ಯದೆಡೆ ಸಾಗಲು ವೈಚಾರಿಕಗಳ ಕೃಷಿಯನ್ನು ಮಾಡಿದ್ದಾರೆ. ಅವುಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರು ಮತ್ತು ಡಾ.ಬಿ.ಆರ್ ಅಂಬೇಡ್ಕರ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಪ್ರೊ.ಗೌರಿ ಮಾಣಿಕ್ ಮಾನಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿ ಯಲ್ಲಿ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಕಾರಣಿಭೂತರಾದ ಪ್ರೊ.ಸೋಮಶೇಖರ್ ಅವರನ್ನು ನೆನೆದರು.
ಕಾರ್ಯಾಗಾರದಲ್ಲಿ ಪ್ರೊ.ಮೇಧಾವಿನಿ ಕಟ್ಟಿ ವೇದಿಕೆಯಲ್ಲಿದ್ದರು. ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರುಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ