ಮಂಗಳವಾರ, ಡಿಸೆಂಬರ್ 5, 2023

ಬೇಡಿಕೆಗಳ ಈಡೇರಿಕೆಗಾಗಿ 345 ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟಿಸುತ್ತಿರುವವರ ಕಡೆ ತುರ್ತಾಗಿ ಗಮನ ನೀಡಿರಿ: ವೈ.ಎಂ.ಸತೀಶ್

ಬಳ್ಳಾರಿ,ಡಿ.05(ಕರ್ನಾಟಕ ವಾರ್ತೆ): ತಾಲ್ಲೂಕಿನ ಸಿರಿವಾರ-ಚಾಗನೂರು ಗ್ರಾಮದ 900.96 ಎಕರೆ ಭೂ ಪ್ರದೇಶದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಡಿಪಿಆರ್ (ಡಿಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಸಿದ್ದಪಡಿಸುವ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದು ಎಂ.ಬಿ.ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. ಬಳ್ಳಾರಿ-ವಿಜಯನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಎಂಎಲ್‍ಸಿ ವೈ.ಎಂ. ಸತೀಶ್ ಅವರು ಮೇಲ್ಮನೆಯಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಸಚಿವ ಎಂ.ಬಿ.ಪಾಟೀಲ್ ಅವರ ಪರವಾಗಿ ಉತ್ತರ ನೀಡಿದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಅವರು, ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಸ್ವಾಧೀನ ಮಾಡಿಕೊಂಡಿರುವ 806.34 ಎಕರೆ ಭೂಮಿಯನ್ನು ಬಳ್ಳಾರಿ ತಹಸೀಲ್ದಾರರಿಗೆ ಹಸ್ತಾಂತರ ಮಾಡಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ವಿಮಾನ ನಿಲ್ದಾಣದ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಡಿಪಿಆರ್ (ಡಿಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಸಿದ್ಧಪಡಿಸುವ ಪ್ರಸ್ತಾವನೆಯು ಹಣಕಾಸು ಇಲಾಖೆಯಿಂದ ಶೀಘ್ರದಲ್ಲಿಯೇ ಅನುಮೋದನೆ ಸಿಗಲಿದೆ ಎಂದರು. ಇದಕ್ಕೆ ವೈ.ಎಂ. ಸತೀಶ್ ಅವರು ಮಾತನಾಡಿ, ಹರಗಿನಡೋಣಿ - ಕುಡತಿನಿ ಮಧ್ಯದಲ್ಲಿದ್ದ ಹಳೆಯದಾದ ಬಂಡಿಜಾಡು ರಸ್ತೆಯನ್ನು ಅರ್ಸೆಲ್ಲರ್ ಮಿತ್ತಲ್‍ನ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕಂಪನಿಯ ವಶಕ್ಕೆ ನೀಡಿರುವ ಕಾರಣ ಕಂಪನಿಯು ಈ ರಸ್ತೆಯನ್ನು ಮುಚ್ಚಿದೆ. ಕಂಪನಿಯು ಈ ರಸ್ತೆಯನ್ನು ಮುಚ್ಚಿರುವ ಕಾರಣ ಮೂಲಕ ವಿದ್ಯಾರ್ಥಿಗಳು, ಕೆಪಿಟಿಸಿಎಲ್ ಹಾಗೂ ಇನ್ನಿತರೆ ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗುವವರು, ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುವುದರ ಜೊತೆಯಲ್ಲಿ 30 ಕಿಮೀ ಸುತ್ತ ತಿರುಗಿ ಕುಡತಿನಿ ತಲುಪಬೇಕಾಗಿದೆ. ಮುಚ್ಚಿರುವ ರಸ್ತೆಯನ್ನು ತೆಗೆದು ಹಗರಿನಡೋಣಿಯ ಗ್ರಾಮಸ್ಥರು-ವಿದ್ಯಾರ್ಥಿಗಳು; ಕಾರ್ಮಿಕರು ನಿತ್ಯ ತಿರುಗಾಡಲು ಅವಕಾಶ ಕಲ್ಪಿಸಬೇಕು ಎಂದು ಸದನಕ್ಕೆ ಕೋರಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಅವರು ಮಾತನಾಡಿ, ಹರಗಿನಡೋಣಿ ಗ್ರಾಮಸ್ಥರು ಕುಡತಿನಿ ಮಧ್ಯೆ ತಿರುಗಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸದನಕ್ಕೆ ಉತ್ತರಿಸಿದರು. ಉತ್ತಮ ಗಾಲ್ವಾ, ಅರ್ಸೆಲರ್ ಮಿತ್ತಲ್ ಪ್ರಾರಂಭವಾಗದ ಕಾರಣ ಭೂ ನಿರಾಶ್ರಿತ ರೈತರು ಉದ್ಯೋಗ, ಹೆಚ್ಚುವರಿ ಪರಿಹಾರ, ಇನ್ನಿತರೆ ಸೌಲಭ್ಯಗಳಿಗಾಗಿ ಆಗ್ರಹಿಸಿ 345 ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಇವರ ಬೇಡಿಕೆಗಳ ಈಡೇರಿಕೆಗೆ ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಕೇಳಿದ ಪ್ರಶ್ನೆಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಅವರು ಪ್ರತಿಕ್ರಿಯಿಸಿ, ಇಂಟಿಗ್ರೇಟೆಡ್ ಸ್ಟೀಲ್‍ಪ್ಲಾಂಟ್ ನಿರ್ಮಾಣ ಮಾಡಲು ಉತ್ತಮಗಾಲ್ವಾ ಫೆರೋಸ್ ಲಿಮಿಟೆಡ್‍ಗೆ 4877.81 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಕೈಗಾರಿಕೆ ನಿರ್ಮಾಣಕ್ಕಾಗಿ ಮಿನಿಸ್ಟ್ರಿ ಆಫ್ ಎನ್ವಿರಾಮ್ಮೆಂಟ್ ಅಂಡ್ ಫಾರೆಸ್ಟ್ (ಎಂಒಇಎಫ್)ನ ಎನ್ವಿರಾಮ್ಮೆಂಟ್ ಕ್ಲಿಯರೆನ್ಸ್‍ನ ಅನುಮತಿಗಾಗಿ ಕಂಪನಿಯು ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಕ್ಕಿಲ್ಲ. ಭೂ ಸ್ವಾಧೀನದ ಪರಿಹಾರ ಹೆಚ್ಚಳಕ್ಕಾಗಿ ಕೆಲ ರೈತರು ಹೂಡಿರುವ ದಾವೆ ನ್ಯಾಯಾಲಯದಲ್ಲಿದೆ. ಕಾರಣ ಕಂಪನಿಯು ಈ ಯೋಜನೆಯ ಅನುಷ್ಠಾನಕ್ಕಾಗಿ ಹೆಚ್ಚುವರಿಯಾಗಿ 6 ವರ್ಷಗಳ ಕಾಲಾವಕಾಶವನ್ನು ಕೋರಿದೆ. ಈ ಕುರಿತು ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಸೂಕ್ತ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಅರ್ಸೆಲ್ಲರ್ ಮಿತ್ತಲ್‍ನ ವಿಷಯ ಸುಪ್ರೀಂಕೋರ್ಟ್‍ನಲ್ಲಿದೆ ಎಂದು ಉತ್ತರಿಸಿದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ