ಬುಧವಾರ, ನವೆಂಬರ್ 22, 2023
ಬರ ಪರಿಹಾರ ಪಡೆಯಲು ರೈತ ಗುರುತಿನ ಸಂಖ್ಯೆ (ಎಫ್ಐಡಿ) ಕಡ್ಡಾಯ
ಬಳ್ಳಾರಿ,ನ.22(ಕರ್ನಾಟಕ ವಾರ್ತೆ):
ಬೆಳೆ ವಿಮೆ ನೋಂದಣಿಗೆ, ಕನಿಷ್ಟ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು ರೈತರ ಗುರುತಿನ ಸಂಖ್ಯೆ (ಎಫ್ಐಡಿ) ಕಡ್ಡಾಯವಿದ್ದು, ಎಫ್ಐಡಿ ಮಾಡಿಸದ ರೈತರು ಕೂಡಲೇ ಹತ್ತಿರದ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ನೋಂದಣಿ ಮಾಡಿಸಿ ಎಫ್ಐಡಿ ಪಡೆಯಬೇಕು.
ಜಿಲ್ಲೆಯಲ್ಲಿ ಒಟ್ಟು 3,82,760 ಜಮೀನಿನ ಸರ್ವೆ ನಂಬರ್ಗಳಿದ್ದು, ಈವರೆಗೆ 2,23,426 ಸರ್ವೆ ನಂಬರ್ಗಳು ಮಾತ್ರ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಾಗಿರುತ್ತವೆ. ಇನ್ನೂ 1,59,334 (ಬಳ್ಳಾರಿ ತಾಲ್ಲೂಕಿನ 56619, ಕುರುಗೋಡು ತಾಲ್ಲೂಕಿನ 17173, ಸಿರುಗುಪ್ಪ ತಾಲ್ಲೂಕು 47581, ಕಂಪ್ಲಿ ತಾಲ್ಲೂಕಿನ 18328, ಸಂಡೂರು ತಾಲ್ಲೂಕಿನ 21760) ಸರ್ವೆ ನಂಬರ್ನ ಜಮೀನಿನ ವಿವರಗಳು ದಾಖಲಾಗಿರುವುದಿಲ್ಲ. ಆದ್ದರಿಂದ ಎಲ್ಲಾ ರೈತರು ತಾವು ಹೊಂದಿರುವ ಜಮೀನಿನ ಎಲ್ಲಾ ಪಹಣಿಗಳನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡಬೇಕು ಎಂದು ತಿಳಿಸಿದ್ದಾರೆ.
*ವಿಶೇಷ ಸೂಚನೆ:* ನಿಮ್ಮ ಯಾವುದೇ ಪಹಣಿಗಳು ಫ್ರೂಟ್ಸ್ (ಈಖUIಖಿS) ತಂತ್ರಾಂಶದಲ್ಲಿ ದಾಖಲಿಸಲು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು.
ತಾವು ಹೊಂದಿರುವ ಜಮೀನಿನ ಎಲ್ಲಾ ಪಹಣಿಗಳನ್ನು, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳೊಂದಿಗೆ ಕೃಷಿ ಇಲಾಖೆ (ಹೋಬಳಿ ರೈತ ಸಂಪರ್ಕ ಕೇಂದ್ರ), ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ