ಶುಕ್ರವಾರ, ನವೆಂಬರ್ 24, 2023

ಕೃಷಿ ಇಲಾಖೆ: ರೈತರು ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಕರೆ

ಬಳ್ಳಾರಿ,ನ.24(ಕರ್ನಾಟಕ ವಾರ್ತೆ): ಕೃಷಿ ಇಲಾಖೆಯಿಂದ 2023-24ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆಗೆ ಬೆಳೆ ಸಾಲ ಪಡೆದ, ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ. ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಬೆಳೆಗಳಾದ ಜೋಳ, ಕಡಲೆ ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಬೆಳೆಗಳಾದ ನೆಲಗಡಲೆ (ಶೇಂಗಾ), ಭತ್ತ ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ನೀರಾವರಿ ಬೆಳೆಗಳಾದ ಮುಸುಕಿನ ಜೋಳ, ಬೇಸಿಗೆ ಹಂಗಾಮಿನ ಸೂರ್ಯಕಾಂತಿ, ಈರುಳ್ಳಿ ಹಾಗೂ ಮಳೆಯಾಶ್ರಿತ ಬೆಳೆಗಳಾದ ಹುರುಳಿ, ಸೂರ್ಯಕಾಂತಿ, ಕುಸುಮೆ ಬೆಳೆಗಳು ಜಿಲ್ಲೆಯ ಬೆಳೆಗಳಾಗಿವೆ. *ಬೆಳೆ ವಿಮೆ ನೋಂದಣಿಗೆ ಕೊನೆಯ ದಿನ:* ಜೋಳ, ಕಡಲೆ ಬೆಳೆಗೆ ಡಿ.30, ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಮೆ ಬೆಳೆಗಳಿಗೆ ಡಿ.15, ಹುರುಳಿ, ಈರುಳ್ಳಿ ಡಿ.01. ಬೇಸಿಗೆ ಬೆಳೆಗಳಾದ ಭತ್ತ, ನೆಲಗಡಲೆ (ಶೇಂಗಾ), ಸೂರ್ಯಕಾಂತಿ ಹಾಗೂ ಈರುಳ್ಳಿ ಬೆಳೆಗಳಿಗೆ 2024ರ ಫೆ.28ರವರೆಗೆ ಅವಕಾಶವಿದೆ. ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‍ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ