ಶನಿವಾರ, ಏಪ್ರಿಲ್ 20, 2024

ತಪ್ಪದೇ ಮತದಾನ ಮಾಡಲು ದೃಢಸಂಕಲ್ಪ ಮಾಡಿ: ಜಿ.ಖಲೀಲ್ ಸಾಬ್

ಬಳ್ಳಾರಿ,ಏ.20(ಕರ್ನಾಟಕ ವಾರ್ತೆ): ಮೇ 07 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಯಾವುದೇ ಒತ್ತಡವಿಲ್ಲದೆ, ಆಮೀಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಿ ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಹಾನಗರ ಪಾಲಿಕೆ ವತಿಯಿಂದ ಶನಿವಾರ ನಗರದ ಅಶೋಕ್ ನಗರ, ಹವಂಭಾವಿ, ಭುವನಗಿರಿ ಏರಿಯಾ ಪ್ರದೇಶಗಳಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಬೇಸಿಗೆಯ ಬಿಸಿಲು ಜಾಸ್ತಿ ಇದೆ ಎಂದು ಹಿಂಜರಿಯದೇ, ತಪ್ಪದೇ ಮತಗಟ್ಟೆಗಳಿಗೆ ಬಂದು ಮತದಾನ ಮಾಡಬೇಕು. ಮತದಾನದ ವೇಳೆಯಲ್ಲಿ ಮೂಲಭೂತ ಸೌಲಭ್ಯಗಳಾದ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಈ ಬಾರಿಯ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಲು ಎಲ್ಲರೂ ತಪ್ಪದೇ ಮತದಾನ ಮಾಡುತ್ತೇನೆ ಎಂದು ದೃಢಸಂಕಲ್ಪ ಮಾಡಬೇಕು ಎಂದು ಹೇಳಿದರು. ಜಾಥಾದಲ್ಲಿ “ನಿಮ್ಮ ಮತಗಟ್ಟೆಯ ಬಗ್ಗೆ ತಿಳಿಯಿರಿ” ಎನ್ನುವ ಘೋಷ ವಾಕ್ಯದಡಿ ಮನೆ ಮನೆಗೆ ತೆರಳಿ ಕರಪತ್ರ ಹಿಡಿದು ಘೋಷಣೆ ಕೂಗುತ್ತಾ ಮತದಾನ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಶ್ರೀನಿವಾಸ್, ಪಾಲಿಕೆಯ ಯೋಜನಾ ವ್ಯವಸ್ಥಾಪಕ ದೇವರಾಜ್, ಕಂದಾಯ ಮತ್ತು ಅಭಿವೃಧ್ಧಿ ಇಲಾಖೆಯ ಉಪ ಆಯುಕ್ತ ಗುರುರಾಜ್ ಸವದಿ ಸೇರಿದಂತೆ ಆರೋಗ್ಯ, ಕಂದಾಯ ಮತ್ತು ತಾಂತ್ರಿಕ ಇಲಾಖೆಯ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಭಾಗವಹಿಸಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ