ಶುಕ್ರವಾರ, ಏಪ್ರಿಲ್ 26, 2024

ಕೊಂಚಿಗೇರಿ; ಮನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ

ಬಳ್ಳಾರಿ,ಏ.26(ಕರ್ನಾಟಕ ವಾರ್ತೆ): ಮೇ 07 ರಂದು ತಪ್ಪದೇ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಬೇಕು ಎಂದು ಕೊಂಚಿಗೇರಿ ಗ್ರಾಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೀಲಾವತಿ ಅವರು ಹೇಳಿದರು. ಇಂದು, ಸಿರುಗುಪ್ಪ ತಾಲ್ಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದರಾಂಪುರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸ್ಮಶಾನದ ಕೆರೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಿರತರಾದ ಕೂಲಿ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿಯಲ್ಲಿ ಅವರು ಮಾತನಾಡಿದರು. ಲೋಕಸಭೆ ಚುನಾವಣೆ 2024 ರ ಪ್ರಯುಕ್ತ ಮೇ 07 ರಂದು ತಪ್ಪದೇ ಮತದಾನ ಮಾಡಿ, ತಮ್ಮ ಕುಟುಂಬದವರಿಗೂ ಮತದಾನ ಮತದಾನ ಮಾಡಿಸಬೇಕು ಎಂದರು. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರಿಗೆ ನಿರಂತರವಾಗಿ ನರೇಗಾ ಯೋಜನೆಯಡಿ ಕೆಲಸ ಒದಗಿಸಲು ಹಾಗೂ ವಲಸೆ ಹೋಗುವುದನ್ನು ತಡೆಯಲು ‘ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತರಿ’ ಅಭಿಯಾನದಡಿ ಕೆಲಸ ನೀಡಲಾಗುತ್ತಿದೆ ಎಂದು ತಿಳಿಸಿದರು. ನರೇಗಾ ಯೋಜನೆಯಡಿ ಆರ್ಥಿಕ ವರ್ಷದಲ್ಲಿ ಕೂಲಿ ಮೊತ್ತ ರೂ.349 ಆಗಿದ್ದು, ಅಳತೆಗೆ ತಕ್ಕಂತೆ ಕೆಲಸ ಮಾಡಿದಲ್ಲಿ ಒಟ್ಟು ಮೊತ್ತ ಪಾವತಿ ಮಾಡಲಾಗುವುದು ಎಂದು ತಿಳಿಸಿದರು. ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ವೈಯಕ್ತಿಕ ಹಾಗೂ ಸಾಮುದಾಯ ಕಾಮಗಾರಿಗಳ ಕುರಿತು ತಿಳಿಸಿದ ಅವರು, ನರೇಗಾ ಯೋಜನೆಯಡಿ ಕೂಲಿಕಾರ್ಮಿಕರ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಮನೆಯ ವ್ಯವಸ್ಥೆ ಮಾಡಲಾಗಿದ್ದು, 06 ತಿಂಗಳಿನಿಂದ 03 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದರು. ಎನ್‍ಎಂಎಂಎಸ್ ಆಪ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿದ್ದು, ಪ್ರತಿದಿನ 02 ಬಾರಿ ಕಡ್ಡಾಯವಾಗಿ ಹಾಜರಾಗಿ ಹಾಕಬೇಕು ಎಂದು ತಿಳಿಸಿದರು. ನಂತರ ಮೇಟಿಗಳಿಗೆ ನರೇಗಾ ಐಡಿ ಕಾರ್ಡ್ ವಿತರಣೆ ಮಾಡಲಾಯಿತು. ನರೇಗಾ ಯೋಜನೆಯ ಟೋಪಿ, ಸಮವಸ್ತ್ರ, ಪ್ರಥಮ ಚಿಕಿತ್ಸಾ ಪಟ್ಟಿಗೆ, ಕುಡಿಯುವ ನೀರಿನ ಕ್ಯಾನ್‍ಗಳನ್ನು ವಿತರಿಸಲಾಯಿತು. ನರೇಗಾ ಯೋಜನೆಯ ಏಕೀಕೃತ ಸಹಾಯವಾಣಿ ಸಂಖ್ಯೆ 8277506000 ಯನ್ನು ಚಿತ್ರದ ಮೂಲಕ ಕೂಲಿ ಕಾರ್ಮಿಕರಿಗೆ ತಿಳಿಸಿದರು. ಈ ವೇಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ವೀರೇಶ್, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಖಾಸಿಂ, ಗಣಕಯಂತ್ರ ನಿರ್ವಾಹಕ ಪಂಪಾಪತಿ, ಬಿಎಫ್‍ಟಿಗಳಾದ ಶಿವರಾಜ್.ಬಿ., ಗ್ರಾಮ ಕಾಯಕ ಮಿತ್ರರಾದ ವನಜಾಕ್ಷಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಎನ್‍ಆರ್‍ಎಲ್‍ಎಂ ಸಿಬ್ಬಂದಿಗಳು, ಮೇಟಿಗಳು ಹಾಗೂ 200 ಕೂಲಿ ಕಾರ್ಮಿಕರು ಹಾಜರಿದ್ದರು. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ