ಸೋಮವಾರ, ಆಗಸ್ಟ್ 7, 2023

*ಬಳ್ಳಾರಿಯಲ್ಲಿ ಬೃಹತ್ ಮ್ಯಾರಥಾನ್; 2500 ಕ್ಕೂ ಹೆಚ್ಚು ಮಂದಿ ಭಾಗಿ* *ನಿಯಮಿತ ವ್ಯಾಯಾಮದಿಂದ ಫಿಟ್ ಆಗಿರಿ: ಸಚಿವ ನಾಗೇಂದ್ರ*

ಬಳ್ಳಾರಿ,ಆ.06(ಕರ್ನಾಟಕ ವಾರ್ತೆ): ಪ್ರತಿಯೊಬ್ಬರೂ ದಿನನಿತ್ಯ ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು. ಭಾನುವಾರದಂದು, ನಗರದ ಮೋಕಾ ರಸ್ತೆಯ ವಿಸ್ಡಮ್‌ಲ್ಯಾಂಡ್ ಶಾಲಾ ಮೈದಾನದಿಂದ ಬಳ್ಳಾರಿ ಸೈಕ್ಲಿಂಗ್ ಅಸೋಶಿಯೇಶನ್, ರನ್ನರ್ಸ್ ಆಫ್ ಫೌಂಡೇಶನ್ ಹಾಗೂ ಜೆಎಸ್ ಡಬ್ಲ್ಯೂ ಸ್ಟೀಲ್ ಸಿಟಿ ರನ್ 2023 ಇವರಿಂದ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವ್ಯಾಯಾಮ, ಇನ್ನಿತರೆ ಪಿಟ್ನೆಸ್ ವರ್ಕೌಟ್ ಗಳನ್ನು ದಿನನಿತ್ಯ ಮಾಡುವುದರ ಮೂಲಕ ಸಾಂದರ್ಭಿಕವಾಗಿ ಸೀಮಿತಗೊಳಿಸಬಾರದು ಎಂದು ಹೇಳಿದರು. ಮ್ಯಾರಥಾನ್ ಓಟಗಳು ಕೇವಲ ರಾಜಧಾನಿ, ಮೆಟ್ರೋ ನಗರಗಳಲ್ಲಿ ಮಾತ್ರ ನಡೆಸಲಾಗುತ್ತಿತ್ತು, ಆದರೆ ಈ ದಿನ ನಮ್ಮ ನಗರದಲ್ಲಿ ಹಮ್ಮಿಕೊಂಡಿದ್ದು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಯೋಮಾನದ ಜನರನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ತಮ್ಮ ಓಟವನ್ನು (5k ಮತ್ತು 10k ಮಾತ್ರ) ಪೂರ್ಣಗೊಳಿಸಿದ ನಂತರ ಫಿನಿಶರ್‌ನ ಪದಕ ಪಡೆದುಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರು ಪದಕ ವಿತರಣೆ ಮಾಡಿದರು. ಮ್ಯಾರಥಾನ್ ನಲ್ಲಿ ಎಲ್ಲಾ ವಯೋಮಾನದವರು ಸೇರಿ 2500 ಮಂದಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಮ್ಯಾರಥಾನ್ ನಲ್ಲಿ 10K, 5K ಮತ್ತು 3k ಮಾರ್ಗಗಳನ್ನು ಗುರುತಿಸಲಾಗಿತ್ತು. ಮ್ಯಾರಥಾನ್ ನ ಸ್ಟಾರ್ಟ್ ಲೈನ್ ಝೋನ್‌ನಲ್ಲಿ ಮತ್ತು ಕೋರ್ಸ್‌ನ ಉದ್ದಕ್ಕೂ 2 ಪ್ರಮುಖ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸೆ/ಆಂಬ್ಯುಲೆನ್ಸ್ ಇರಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಯಾವುದೇ ವೈದ್ಯಕೀಯ ಸಮಸ್ಯೆಗಳಿಗೆ ಸಹಾಯ ಮಾಡಲು ಪ್ರಮುಖ ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ನೀರಿನ ಕೇಂದ್ರಗಳನ್ನು ಲಭ್ಯವಿರಿಸಲಾಗಿತ್ತು. ಮ್ಯಾರಥಾನ್ ನಲ್ಲಿ ನೊಂದಾಯಿಸಿಕೊಂಡು ಭಾಗವಹಿಸಿದ ಪ್ರತಿಯೊಬ್ಬರಿಗೂ ಆನ್‌ಲೈನ್‌ ಮೂಲಕ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಜೆಎಸ್ ಡಬ್ಲ್ಯೂ ಸಂಸ್ಥೆ ಅಧ್ಯಕ್ಷ ಮುರುಗನ್ ಸೇರಿದಂತೆ ಸಾರ್ವಜನಿಕರು ಹಾಗೂ ಇತರರು ಭಾಗವಹಿಸಿದ್ದರು. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ