ಶುಕ್ರವಾರ, ಆಗಸ್ಟ್ 25, 2023

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಕಡ್ಡಾಯವಾಗಿ ಇ-ಕೆವೈಸಿ ನೊಂದಣಿ ಮಾಡಿಕೊಳ್ಳಿ

ಬಳ್ಳಾರಿ,ಆ.25(ಕರ್ನಾಟಕ ವಾರ್ತೆ): ಕೃಷಿ ಇಲಾಖೆಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ರೈತ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ. ಇ-ಕೆವೈಸಿ ಮಾಡಿಸಿಕೊಳ್ಳದ ರೈತರಿಗೆ ಮುಂದಿನ ಕಂತು ತಮ್ಮ ಖಾತೆಗೆ ಜಮೆ ಅಗುವುದಿಲ್ಲ ಹಾಗೂ ಮುಂದಿನ ಯೋಜನೆಯ ಆರ್ಥಿಕ ಸೌಲಭ್ಯದಿಂದ ವಂಚಿತರಾಗಬಹುದು. ಆದ್ದರಿಂದ ಇಲ್ಲಿಯವರೆಗೂ ಇ-ಕೆವೈಸಿ ಮಾಡಿಸದ ರೈತ ಫಲಾನುಭವಿಗಳು ತಮ್ಮ ಆಧಾರ್‍ಸಂಖ್ಯೆ ಹಾಗೂ ಆಧಾರ್‍ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ಹತ್ತಿರದ ಗ್ರಾಹಕರ ಸೇವಾ ಕೇಂದ್ರ, ಗ್ರಾಮಓನ್ ಕೇಂದ್ರ, ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಓಟಿಪಿ ಅಥವಾ ಬಯೋ-ಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ರೈತರು ತಾವೇ ಸ್ವತಃ ಖುದ್ದಾಗಿ ಪಿಎಂ-ಕಿಸಾನ್ ವೆಬ್‍ಸೈಟ್(ತಂತ್ರಾಂಶ)ದಲ್ಲಿ ಲಿಂಕ್‍ನ್ನು ಬಳಸಿ ಓಟಿಪಿ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು ಅಥವಾ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಪೋಸ್ಟಲ್ ಅಕೌಂಟ್ ತೆರೆಯುವ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಅಥವಾ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಮುಖ ಗುರುತಿಸುವಿಕೆ ಆಪ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ನೊಂದಾಯಿಸಿಕೊಳ್ಳಬಹುದು. ಎಲ್ಲಾ ರೈತರು ಇ-ಕೆವೈಸಿ ಮಾಡಿಸಿ ತಮ್ಮ ಅಕ್ಕಪಕ್ಕದ ರೈತರಿಗೆ ಮಾಡಿಸುವಂತೆ ತಿಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ