ಶುಕ್ರವಾರ, ಆಗಸ್ಟ್ 18, 2023

ಮೀನುಗಾರಿಕೆ ಇಲಾಖೆ: ಜಲಕೃಷಿ ಬೆಳೆ ವಿಮೆಗೆ ಅರ್ಜಿ ಅಹ್ವಾನ

ಬಳ್ಳಾರಿ,ಆ.18(ಕರ್ನಾಟಕ ವಾರ್ತೆ): 2023-24ನೇ ಸಾಲಿಗೆ ಹೈದರಾಬಾದ್‍ನ ಎನ್‍ಎಫ್‍ಡಿಬಿ ವತಿಯಿಂದ ಮೀನು ಕೃಷಿಯಲ್ಲಿ ತೊಡಗಿರುವವರಿಗೆ ವಿಮೆ ನೀಡಲು ಜಲಕೃಷಿ ಬೆಳೆ ವಿಮೆ-ಪೈಲೆಟ್ ಯೋಜನೆಗೆ ಅರ್ಹ ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಮೀನುಗಾರಿಕೆ ನಿರ್ದೇಶಕರಿಂದ ಸಿಹಿ ನೀರಿನ ಮೀನು ಕೃಷಿಯಡಿ ಬಳ್ಳಾರಿ ಜಿಲ್ಲೆಯನ್ನು ಆಯ್ಕೆ ಮಾಡಿ 15.00 ಹೆಕ್ಟೇರ್ ಗುರಿಯನ್ನು ನೀಡಿರುವುದರಿಂದ ಮೀನು ಕೃಷಿಕರು ಅರ್ಜಿ ಸಲ್ಲಿಸಬಹುದಾಗಿದೆ. ಭಾರತೀಯ ದೊಡ್ಡ ಗೆಂಡೆ ಮೀನುಗಳ ಕೃಷಿ ಕೈಗೊಳ್ಳುವ ಅರ್ಹ ಮತ್ತು ಆಸಕ್ತ ಮೀನು ಕೃಷಿಕರು ಸಂಬಂಧಪಟ್ಟ ದಾಖಲೆಗಳೊಂದಿಗೆ ಸೆಪ್ಟೆಂಬರ್ 15 ರೊಳಗಾಗಿ ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಜಲಕೃಷಿ ಬೆಳೆ ವಿಮೆ ಪಡೆಯುವ ಮೀನು ಕೃಷಿಕರು ಹೈದರಾಬಾದ್ ಎನ್‍ಎಫ್‍ಡಿಬಿ ನಿಗದಿಪಡಿಸಿರುವ ವಿಮೆಯ ಪ್ರೀಮಿಯಂ ಮೊತ್ತವನ್ನು ಕಡ್ಡಾಯವಾಗಿ ಪಾವತಿಸಬೇಕಿರುತ್ತದೆ. ಒಬ್ಬ ಕೃಷಿಕರಿಗೆ ಗರಿಷ್ಠ 2.0 ಹೆಕ್ಟೇರ್ ಜಲವಿಸ್ತೀರ್ಣದ ಫಾರಂನ್ನು ಆಯ್ಕೆ ಮಾಡಲಾಗುತ್ತದೆ. ಕೃಷಿಕರು ಪಾವತಿಸುವ ವಿಮೆಯ ಪ್ರೀಮಿಯಂ ಮೊತ್ತ ಸಾಮಾನ್ಯ ವರ್ಗ ಶೇ.20ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಹಿಳಾ ವರ್ಗದವರಿಗೆ ಶೇ.30 ರಷ್ಟು ಸಹಾಯಧನವನ್ನಾಗಿ ಪಾವತಿಸಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರದ ನಾಗಲಕೆರೆ ಹತ್ತಿರದ ಮೀನುಗಾರಿಕೆ ಉಪನಿರ್ದೇಶಕರ ಕಚೇರಿ ಅಥವಾ ಮೊ.9901244116 ಗೆ ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ