ಬುಧವಾರ, ಆಗಸ್ಟ್ 2, 2023

ಸಂಡೂರಿನ ಅಂಕಮನಾಳು ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಂದ ಹಣ ವಸೂಲು; ಪ್ರಕರಣ ದಾಖಲು

ಬಳ್ಳಾರಿ,ಆ.02(ಕರ್ನಾಟಕ ವಾರ್ತೆ): ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹಣ ವಸೂಲಿ ಮಾಡಿರುವುದಕ್ಕೆ, ಗ್ರಾಮ ಒನ್ ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಂಡೂರು ತಾಲೂಕಿನ ಅಂಕಮನಾಳು ಗ್ರಾಮದ ಗ್ರಾಮಒನ್ ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್ ದೇವರಾಜ್ ಎಂಬುವಾತ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪ್ರತಿ ಅರ್ಜಿದಾರರಿಂದ ರೂ.50/- ಹಣ ಪಡೆಯುತ್ತಿರುವುದು ಕಂಡುಬಂದಿದ್ದು, ಸಂಡೂರು ತಾಲೂಕಿನ ಚೋರನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂಕಮನಾಳು ಗ್ರಾಮದ ಮಾರೆಮ್ಮ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು, ಉದ್ದೇಶ ಪೂರ್ವಕವಾಗಿ ಗೃಹಲಕ್ಷ್ಮಿ ಫಲಾನುಭವಿಗಳಿಂದ ಪ್ರತಿ ಅರ್ಜಿಗೆ ರೂ.50/- ಹಣ ಸ್ವೀಕರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಆ.01 ರಂದು ಮಧ್ಯಾಹ್ನ 02 ಕ್ಕೆ ಅಧಿಕಾರಿಗಳ ತಂಡವು ದಾಳಿ ನಡೆಸಿತ್ತು. ಸಂಡೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳನಾಗಪ್ಪ, ಅಂಕಮನಾಳು ಗ್ರಾಮದ ಗ್ರಾಮ ಆಡಳಿತಾಧಿಕಾರಿ ಬಿ.ಕೊಟ್ರಪ್ಪ, ಚೋರನೂರು ಪಟ್ಟಣದ ಕಂದಾಯ ನಿರೀಕ್ಷಕ ಬಿ.ವೀರೇಂದ್ರ ಕುಮಾರ ಅವರು ದಾಳಿ ನಡೆಸಿ ಅಕ್ರಮವನ್ನು ಪತ್ತೆ ಹಚ್ಚಿದ್ದರು. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಂದ ಯಾವುದೇ ಶುಲ್ಕ ಪಡೆಯಬಾರದು ಎಂದು ಸರ್ಕಾರದ ಆದೇಶ ಇದ್ದರೂ ಸಹಿತ ಗೃಹಲಕ್ಷ್ಮಿ ಫಲಾನುಭವಿಗಳಿಂದ ಪ್ರತಿ ಅರ್ಜಿಗೆ ರೂ.50/- ಹಣ ಸ್ವೀಕರಿಸಿ ಸರ್ಕಾರಕ್ಕೆ ನಂಬಿಕೆ ದ್ರೋಹಮಾಡಿ ಮೋಸ ಮಾಡಿರುತ್ತಾರೆ. ಹೀಗಾಗಿ ಇವರ ಮೇಲೆ ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್ ದೂರು ದಾಖಲಿಸಲಾಗಿದೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ