ಭಾನುವಾರ, ಜನವರಿ 21, 2024

ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಜ.21(ಕರ್ನಾಟಕ ವಾರ್ತೆ): ಸ್ಕೌಟ್ಸ್ ಮತ್ತು ಗೈಡ್ಸ್ನ ಸಮಾಜಮುಖಿ ಕೆಲಸಗಳು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವಾ ಮನೋಭಾವ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬಳ್ಳಾರಿ ವತಿಯಿಂದ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 7 ದಿನಗಳ ಜಿಲ್ಲಾ ಮಟ್ಟದ ಸ್ಕೌಟ್ಸ್ ಮಾಸ್ಟರ್ಸ್ ಹಾಗೂ ಗೈಡ್ ಕ್ಯಾಪ್ಟನ್ಸ್ ಗಳ ಮೂಲ ತರಬೇತಿ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಒಂದು ವಾರ ಪಡೆದಿರುವ ತರಬೇತಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಬೇಕು, ನಿಮ್ಮ ಶಾಲೆಯ ಮಕ್ಕಳ ವಿಕಾಸದ ಜತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆಯುವಂತಹ ವಿದ್ಯಾರ್ಥಿಗಳನ್ನು ತಯಾರು ಮಾಡುವ ಸಾಮರ್ಥ್ಯ ಒಬ್ಬ ಶಿಕ್ಷಕರಲ್ಲಿದ್ದು, ಪ್ರತಿಯೊಬ್ಬರು ಇದರ ನಿಯಮಗಳನ್ನು ಪಾಲಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ತಮ್ಮ ಬಾಲ್ಯ ಶಿಕ್ಷಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸೇರಿದ ನೆನಪುಗಳನ್ನು ಮೆಲುಕು ಹಾಕಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯ ಅವರು ಮಾತನಾಡಿ, ಸೇವಾ ಮನೋಭಾವನೆಯಿಂದ ಶ್ರಮಿಸುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತ್ಯಾಗದ ಮತ್ತೊಂದು ಶಬ್ಧವಾಗಿದೆ. ಸೇವಾ ಮನೋಭಾವನೆಯನ್ನು ರೂಪಿಸುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ನ ಸಮಾಜಮುಖಿ ಕೆಲಸಗಳು ಮತ್ತು ಪ್ರತಿಯೊಬ್ಬರಲ್ಲಿ ದೇಶ ಪ್ರೇಮ ಸಾರುವ ಯೋಜನೆಗಳನ್ನು ಮನಗಂಡಿರುವ ಸರಕಾರವು ಆಯವ್ಯಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಕ್ಕೆ ಪ್ರತ್ಯೇಕ ಅನುದಾನ ಮೀಸಲಿಟ್ಟಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ನೀಡುವ ಮೂಲಕ ಅನೇಕ ಅನುಕೂಲಗಳನ್ನು ಸರಕಾರ ಮಾಡುವುದರಿಂದ ಶಿಕ್ಷಕರು ಮತ್ತು ಮಕ್ಕಳು ಮುಕ್ತವಾಗಿ ಭಾಗವಹಿಸಿ ಸ್ಕೌಟ್ಸ್ ಮತ್ತು ಗೈಡ್ಸ್ನ ಅನುಕೂಲ ಪಡೆಯುವ ಜತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದರು. ಒಂದು ವಾರಗಳ ಕಾಲ ತರಬೇತಿ ಪಡೆದ ಶಿಕ್ಷಕರಿಗೆ ಉತ್ತಮವಾಗಿ ತರಬೇತಿ ಪಡೆದು ಸ್ಕೌಟ್ಸ್ ಹಾಗೂ ಗೈಡ್ಸ್ ಶಿಕ್ಷಕರಾಗಲು ಸಮರ್ಥರು ಎಂಬುದಾಗಿ ದೀಕ್ಷೆ ನೀಡುವ ಮೂಲಕ ಬ್ಯಾಡ್ಜ್ ನೀಡಲಾಗುತ್ತದೆ. ಇದರ ಜತೆ ತರಬೇತಿ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಶಿಬಿರದಲ್ಲಿ ಸ್ಕೌಟ್ ವಿಭಾಗದಲ್ಲಿ 88 ಜನ ಶಿಕ್ಷಕರು ಹಾಗೂ ಗೈಡ್ಸ್ ವಿಭಾಗದಲ್ಲಿ 126 ಶಿಕ್ಷಕಿಯರು ಸೇರಿದಂತೆ ಒಟ್ಟು 214 ಜನ ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿ ಕೇಂದ್ರಸ್ಥಾನದ ಕಲ್ಯಾಣ ಕರ್ನಾಟಕ ಹಾಗೂ ರೇಂಜರಿಂಗ್ ವಿಭಾಗದ ಉಸ್ತುವಾರಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಮಲ್ಲೇಶ್ವರಿ ಜುಜಾರೆ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಧ್ಯಕ್ಷ ವೀರೇಶ್, ಉಪಾಧ್ಯಕ್ಷರಾದ ಎಂ.ಟಿ.ಮಲ್ಲೇಶಪ್ಪ, ಜಿಲ್ಲಾ ಖಜಾಂಚಿ ವಿ.ಪ್ರಭಾಕರ್, ಜಿಲ್ಲಾ ತರಬೇತಿ ಆಯುಕ್ತರಾದ ಜಯಶ್ರೀ ಜೋಷಿ, ನಾಗರಾಜ, ತಾಲೂಕು ಕಾರ್ಯದರ್ಶಿಗಳಾದ ಜಿ.ಎಸ್.ಸೋಮಪ್ಪ, ಚಂದ್ರಯ್ಯ ಹಿರೇಮಠದ್, ನಟರಾಜ ಸ್ವಾಮಿ, ಜಿಲ್ಲಾ ಸಂಘಟಕರಾದ ಮೆಹಬೂಬ್ ಭಾಷ ಸೇರಿದಂತೆ ರೋವರ್ಸ್ ಮತ್ತು ರೇಂಜರ್ಸ್ ತರಬೇತುದಾರರು ಹಾಗೂ ಸ್ಕೌಟ್ಸ್ ಮಾಸ್ಟರ್ಸ್ ಹಾಗೂ ಗೈಡ್ ಕ್ಯಾಪ್ಟನ್ಸ್ ಗಳು ಉಪಸ್ಥಿತರಿದ್ದರು. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ