ಬುಧವಾರ, ಅಕ್ಟೋಬರ್ 4, 2023

ಪಿಎಂ-ವಿಶ್ವಕರ್ಮ ಯೋಜನೆಗೆ ಅರ್ಜಿ ಆಹ್ವಾನ

ಬಳ್ಳಾರಿ,ಅ.04(ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಪಿ.ಎಂ-ವಿಶ್ವಕರ್ಮ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ 18 ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅರ್ಹ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಟ್ಟಪ್ಪ ಅವರು ತಿಳಿಸಿದ್ದಾರೆ. ಪಿ.ಎಂ ವಿಶ್ವಕರ್ಮ ಪ್ರಮಾಣ ಪತ್ರ, ಐ.ಡಿ ಕಾರ್ಡ್, ಕೌಶಲ್ಯಾಭಿವೃದ್ಧಿ, ಉಪಕರಣಗಳಿಗೆ ಪ್ರೋತ್ಸಾಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ, ಮಾರುಕಟ್ಟೆ ಬೆಂಬಲ ಸೌಲಭ್ಯ ನೀಡಲಾಗುವುದು. ಈ ಯೋಜನೆಯು 18 ರೀತಿಯ ವ್ಯಾಪಾರಗಳಲ್ಲಿ ತೊಡಗಿರುವ ಕರಕುಶಲಿಗರು ಮತ್ತು ಕುಶಲಕರ್ಮಿಗಳನ್ನು ಒಳಗೊಳ್ಳುತ್ತದೆ. ಅದರಲ್ಲಿ ಬಡಗಿ, ದೋಣಿ ತಯಾರಕರು, ಶಸ್ತ್ರಾಸ್ತ್ರ ತಯಾರಿಸುವವರು (ಆರ್ಮರ್), ಕಮ್ಮಾರರು, ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು, ಬೀಗ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಕಲ್ಲು ಒಡೆಯುವವರು, ಚಮ್ಮಾರರು, ಮೇಸ್ತ್ರಿ, ಬುಟ್ಟಿ/ಚಾಪೆ/ಪೆÇರಕೆ/ಸೆಣಬು ನೇಯುವವರು, ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕರು, ಹೂ ಮಾಲೆ ತಯಾರಕರು, ಮಡಿವಾಳರು, ಟೈಲರ್, ಮೀನಿನ ಬಲೆಯ ತಯಾರಕರು ಅರ್ಹರಾಗಿರುತ್ತಾರೆ. ಈ ಮೇಲಿನ ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಗ್ರಾಮ ಪಂಚಾಯತ್/ಮಟ್ಟದಲ್ಲಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೊಂದಣಿ ಮಾಡಿಕೊಳ್ಳಬಹುದು. *ಅರ್ಹತೆ:* ಕುಶಲಕರ್ಮಿಗಳು 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿರಬೇಕು, 18 ವರ್ಷ ಮೇಲ್ಪಟ್ಟವರಾಗಿರಬೇಕು, ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರು (ಕುಟುಂಬದಲ್ಲಿನ ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು), ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು, ಕುಶಲಕರ್ಮಿಗಳು ಮುದ್ರಾ ಮತ್ತು ಸ್ವ-ನಿಧಿ ಸಾಲ ಪಡೆದವರು ಸಾಲವನ್ನು ಹಿಂದಿರುಗಿಸಿರುವವರನ್ನು ಹೊರತುಪಡಿಸಿ ಬೇರೆ ಯಾವುದೇ ತರಹ ಸಾಲವನ್ನು ಪಡೆದಿರಬಾರದು. *ತರಬೇತಿ ವಿವರ:* ಕುಶಲಕರ್ಮಿಗಳಿಗೆ ನೊಂದಣಿಯಾದ ನಂತರ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಗೌರವಧನ ಮತ್ತು ಇತರೆ ಭತ್ಯೆ ನೀಡಲಾಗುವುದು. ತರಬೇತಿಯ ನಂತರ ಪ್ರಮಾಣಪತ್ರದೊಂದಿಗೆ ರೂ.15 ಸಾವಿರ ಬೆಲೆಬಾಳುವ ಉಪಕರಣವನ್ನು ನೀಡಲಾಗುವುದು. ನಂತರ ಶೇ.5 ಬಡ್ಡಿ ದರದಲ್ಲಿ ರೂ.1 ಲಕ್ಷ ಸಾಲವಾಗಿ ನೀಡಲಾಗುವುದು. ತದನಂತರ 15 ದಿನಗಳವರೆಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಿ ಈಗಾಗಲೇ ಪಡೆದ ರೂ. 1 ಲಕ್ಷ ಸಾಲ ಮರುಪಾವತಿಯಾದ ನಂತರ ರೂ.2 ಲಕ್ಷಗಳ ಸಾಲವನ್ನು ಶೇ.5ರ ಬಡ್ಡಿ ದರದಲ್ಲಿ ನೀಡಲಾಗುವುದು ಹಾಗೂ ತಾವು ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು. ಕುಶಲಕರ್ಮಿಗಳು ಸಂಬಂಧಿಸಿದ ತಮ್ಮ ಗ್ರಾಮ ಪಂಚಾಯತ್/ಪಟ್ಟಣ ಪಂಚಾಯಿತಿ/ ತಾಲ್ಲೂಕು/ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ತ್ವರಿತವಾಗಿ ನೊಂದಣಿ ಮಾಡಿಕೊಳ್ಳಬಹುದು. ಮಾಹಿತಿಗಾಗಿ www.pmvishwakarma.gov.in ಗೆ ಭೇಟಿ ನೀಡಿ ಪಿಎಂ ವಿಶ್ವಕರ್ಮ ಯೋಜನೆಯ ಮಾರ್ಗಸೂಚಿಗಳನ್ನು ನೋಡಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶ್ಯಲಾಭಿವೃದ್ಧಿ ಕಚೇರಿಯ ದೂ.08392-294230 ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳ ಮೊ.9964768334, 7795499904, 8073618080 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶ್ಯಲಾಭಿವೃದ್ಧಿ ಅಧಿಕಾರಿ ಹಟ್ಟಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ