ಶುಕ್ರವಾರ, ಅಕ್ಟೋಬರ್ 13, 2023

ಕೃಷಿ ಇಲಾಖೆಯ ವಿವಿಧ ಸೌಲಭ್ಯ ಪಡೆಯಲು ರೈತ ಗುರುತಿನ ಸಂಖ್ಯೆ(ಎಫ್‍ಐಡಿ) ಕಡ್ಡಾಯ

ಬಳ್ಳಾರಿ,ಅ.13(ಕರ್ನಾಟಕ ವಾರ್ತೆ): ರೈತರು ಬೆಳೆ ವಿಮೆ ನೊಂದಣಿ ಮಾಡಲು, ಕನಿಷ್ಟ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಕೃಷಿ ಇಲಾಖೆಯಿಂದ ಇತರೆ ಸೌಲಭ್ಯ ಪಡೆಯಲು ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಕಡ್ಡಾಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ. ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಮಾಡಿಸದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್‍ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‍ಬುಕ್, ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ನೊಂದಣಿ ಮಾಡಿಸಬೇಕು. ಜಿಲ್ಲೆಯಲ್ಲಿ ಒಟ್ಟು 3,76,620 ಜಮೀನಿನ ಸರ್ವೇ ನಂಬರ್‍ಗಳಿದ್ದು, ಈವರೆಗೆ 2,16,466 ಸರ್ವೆ ನಂಬರ್‍ಗಳು ಮಾತ್ರ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಾಗಿರುತ್ತವೆ. ಇನ್ನೂ 1,60,154 ಸರ್ವೆ ನಂಬರ್‍ನ ಜಮೀನಿನ ವಿವರಗಳು ದಾಖಲಾಗಿರುವುದಿಲ್ಲ. ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲ ಜಮೀನಿನ ಸರ್ವೇ ನಂಬರ್‍ನ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ