ಗುರುವಾರ, ಏಪ್ರಿಲ್ 6, 2023
*ಸಿರುಗುಪ್ಪ: ತೋಟಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ*
ಬಳ್ಳಾರಿ,ಏ.6(ಕರ್ನಾಟಕ ವಾರ್ತೆ): ಸಿರುಗುಪ್ಪ ತೋಟಗಾರಿಕೆ ಇಲಾಖೆಯಿಂದ 2023-24 ನೇ ಸಾಲಿಗೆ ಅನುಷ್ಠಾನಗೊಳ್ಳುತ್ತಿರುವ ಫಲಾನುಭವಿ ಆಧಾರಿತ ನರೇಗಾ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಸಹಾಯಧನ ನೀಡಲು ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಸಣ್ಣ, ಅತಿ ಸಣ್ಣ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಾಳೆ, ಅಂಜೂರ, ತಾಳೆಬೆಳೆ, ದಾಳಿಂಬೆ, ಸಪೋಟ, ಮಾವು, ನುಗ್ಗೆ, ತೆಂಗು, ಪಪ್ಪಾಯ, ಮತ್ತು ಪೇರಲ ಬೆಳೆಗಳನ್ನು ಬೆಳೆಯಲು ಹಾಗೂ ಕೊಳವೆ ಬಾಯಿ ಮರುಪೂರ್ಣ ಘಟಕ ಮಾಡಲು ಸಹಾಯಧನ ನೀಡಲಾಗುವುದು.
ನೀರಾವರಿ ಸೌಕರ್ಯವುಳ್ಳ ರೈತರು ತಮ್ಮ ಜಮೀನುಗಳಲ್ಲಿ ಕಾಮಗಾರಿಗಳನ್ನು ಕೈಗೊಂಡಲ್ಲಿ ನರೇಗಾ ಯೋಜನೆಯ ಅನುದಾನ ಬಳಸಿ ಕೂಲಿ ಮೊತ್ತವನ್ನು ಮತ್ತು ಸಾಮಗ್ರಿ ವೆಚ್ಚವನ್ನು ಆನ್ ಲೈನ್ ಮೂಲಕ ಪಾವತಿ ಮಾಡಲಾಗುವ ವ್ಯವಸ್ಥೆ ಇದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಸಮುದಾಯ ಕೃಷಿಹೊಂಡ, ಹೊಸ ಪ್ರದೇಶ ವಿಸ್ತರಣೆ, ದಾಳಿಂಬೆ, ಅಂಜೂರ, ಈರುಳ್ಳಿ ಶೇಖರಣಾ ಘಟಕ, ಪಾಲಿಹೌಸ್ ನಿರ್ಮಾಣಕ್ಕಾಗಿ ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು.
ಪ್ರಧಾನಮಂತ್ರಿ ಕೃಷಿ ಸಿಂಚಾಯನ ಯೋಜನೆಯಡಿ 2023-24 ನೇ ಸಾಲಿಗೆ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸಲು ಇಲಾಖಾ ಮಾರ್ಗಸೂಚಿ ಪ್ರಕಾರ ಇತರೆ ವರ್ಗದ ರೈತರಿಗೆ ಶೇ.75 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿವಾರು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿಯೂ ಸಹ ಮಾಹಿತಿ ಪಡೆಯಬಹುದು ಎಂದು ಸಿರುಗುಪ್ಪ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ